ಹೈನೋದ್ಯಮಿಗಳಿಗೆ ಬೆಂಗಳೂರು ಹಾಲು ಒಕ್ಕೂಟದಿಂದ ಅನ್ಯಾಯ. ರೈತ ಸಂಘದಿಂದ ಪ್ರತಿಭಟನೆ
ಚನ್ನಪಟ್ಟಣ: ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರು ಪೂರೈಕೆ ಮಾಡುವ ಪ್ರತಿ ಲೀಟರ್ ಹಾಲಿಗೆ 2₹. ಕಡಿತ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತ ಮುಖಂಡ ಸಿ ಪುಟ್ಟಸ್ವಾಮಿ ಮುಂದಾಳತ್ವದಲ್ಲಿ ತಾಲೂಕಿನ ಭೈರಾಪಟ್ಟಣ ಗ್ರಾಮದ ಬಳಿ ಇರುವ ಬಮೂಲ್ ಶಿಬಿರ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.
ಬುಧವಾರ ಬೆಳಿಗ್ಗೆ ಬಮೂಲ್ ಶಿಬಿರ ಕಚೇರಿಯ ಮುಂದೆ ಜಮಾಯಿಸಿದ ರೈತರು, ಹಾಲು ಒಕ್ಕೂಟ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದು, ಮುಂಬಾಗಿಲಿನಿಂದ ಮೂರು ರೂ. ಕೊಟ್ಟು ಹಿಂಬಾಗಿಲಿನಿಂದ ಎರಡು ರೂ ಕಿತ್ತು ಕೊಳ್ಳುವ ಮೂಲಕ ರೈತರಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.
ರಾಜ್ಯದಲ್ಲೀಗ ಭೀಕರ ಬರಗಾಲ ಆವರಿಸಿರುವುದರಿಂದ ಒಂದು ಕಡೆ ರಾಸುಗಳ ಮೇವಿಗೆ ಕೊರತೆ ಉಂಟಾಗಿದ್ದರೆ, ಇನ್ನೊಂದು ಕಡೆ ಪಶು ಆಹಾರದ ಬೆಲೆ ಏರಿಕೆಯಿಂದ ರೈತರು ತತ್ತರಿಸಿದ್ದಾರೆ. ಇಂಥಹ ಸಮಯದಲ್ಲಿ ಬಮೂಲ್ ಗೆ ರೈತರು ಪೂರೈಕೆ ಮಾಡುವ ಹಾಲಿಗೆ 2.ರೂ. ಕಡಿತ ಮಾಡಿರುವುದು ಬರಗಾದಲ್ಲಿ ಗಾಯದ ಮೇಲೆ ಇನ್ನೊಂದು ಬರೆ ಎಳೆದಂತಾಗಿದೆ ಎಂದರು.
ಬೆಲೆ ಏರಿಕೆಯಿಂದ ಹಾಲು ಉತ್ಪಾದನಾ ವೆಚ್ಚ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಆದರೆ, ಇದನ್ನು ಪರಿಗಣಿಸದ ಒಕ್ಕೂಟ ಏಕಾಏಕಿ ಹಾಲಿನ ಬೆಲೆಯನ್ನು 2.ರೂ. ಕಡಿತಗೊಳಿಸುವ ಮೂಲಕ ಹೈನ್ಯೋದ್ಯಮವನ್ನೇ ನಂಬಿಕೊಂಡಿರುವ ರೈತರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಎಂಎಫ್, ಎನ್ಡಿಡಿಬಿ ಸೇರಿದಂತೆ ಎಲ್ಲ ಹಾಲು ಒಕ್ಕೂಟಗಳು ಹಾಗೂ ಪಶು ಸಂಗೋಪನ ಇಲಾಖೆಗಳು ರೈತರು ಪೂರೈಸುವ ಹಾಲಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡದೇ ರೈತರಿಗೆ ಅನ್ಯಾಯ ಮಾಡುತ್ತಾ ಬಂದಿದೆ. ಒಕ್ಕೂಟಗಳು ರೈತರಿಗೆ ಮಾಡುತ್ತಿರುವ ಈ ದ್ರೋಹದಿಂದಾಗಿ ರೈತರು ಪರಿತಪಿಸುವಂತಾಗಿದೆ. ರಾಸುಗಳ ನಿರ್ವಹಣೆ, ಹಾಲು ಉತ್ಪಾದನಾ ವೆಚ್ಚ ಎಲ್ಲವನ್ನು ಗಣನೆಗೆ ತೆಗೆದುಕೊಂಡು ವೈಜ್ಞಾನಿಕ ಬೆಲೆ ನಿಗದಿ ಮಾಡಿದ್ದರೆ, ಇಂದು ರೈತರು ಪ್ರತಿಭಟನೆ ನಡೆಸುವ ಅನಿವಾರ್ಯತೆಯೇ ಬರುತ್ತಿರಲಿಲ್ಲ. ಕಳೆದ ಎಪ್ಪತ್ತಾರು ವರ್ಷಗಳಿಂದ ರೈತರು ಬೆಳೆಯುವ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಿಲ್ಲ. ಹೈನುಗಾರಿಕೆಗಾದರೂ ನಿಗದಿ ಪಡಿಸಲಿ ಎಂದು ಆಗ್ರಹಿಸಿದರು.
ಬಮೂಲ್ ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ, ಚನ್ನಪಟ್ಟಣ ವು ರಾಜ್ಯದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಅಲ್ಲಿರುವ ಅನಾವಶ್ಯಕ ಆಡಳಿತ್ಮಾಕ ವೆಚ್ಚ. ಅಗತ್ಯಕ್ಕೂ ಮೀರಿ ಇರುವ ಸಿಬ್ಬಂದಿ, ಅಗತ್ಯಕ್ಕಿಂತ ಹೆಚ್ಚು ವ್ಯವಸ್ಥಾಪಕರು ಹಾಗೂ ಅವರಿಗೆ ನೀಡಲಾಗುವ ಕಾರು ಮತ್ತಿತರ ಸೌಲಭ್ಯ. ಪಾರದರ್ಶಕತೆ ಇಲ್ಲದ ಖರೀದಿ ನೀತಿಯಿಂದಾಗಿ ಖರ್ಚು ದುಬಾರಿಯಾಗುತ್ತಿದೆ. ಒಕ್ಕೂಟದ ಅಧಿಕಾರಿಗಳಿಗೆ ಜೀವನ ನಿರ್ವಹಣೆ ಸೂಚ್ಯಂಕ ಆಧಾರಿತವಾಗಿ ಸಂಬಳ ಹಾಗೂ ಭತ್ಯೆಗಳು ದೊರೆಯುತ್ತವೆ. ಆದರೆ, ಬವಣೆ ಅನುಭವಿಸಿ ಹಾಲು ಪೂರೈಕೆ ಮಾಡುವ ರೈತರಿಗೆ ಯಾವುದೇ ಸೂಚ್ಯಂಕವಿಲ್ಲದಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನಾದರೂ ಹಾಲು ಒಕ್ಕೂಟ ತನ್ನ ರೈತ ವಿರೋಧಿ ಧೋರಣೆಯನ್ನು ಬದಲಿಸಿಕೊಳ್ಳಬೇಕು. ರೈತರು ಪೂರೈಕೆ ಮಾಡುವ ಹಾಲಿನ ದರವನ್ನು ಹೆಚ್ಚಿಸುವ ಜತೆಗೆ ನಮ್ಮ ವಿವಿಧ 17ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದಲಿ ಮುಂದೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ರೈತ ಮುಖಂಡ ಸಿ.ಪುಟ್ಟಸ್ವಾಮಿ, ರೈತ ಮುಖಂಡರಾದ ಬೋರಾಪುರ ಶಂಕರೇಗೌಡ, ಮಲ್ಲಿಜಾರ್ಜುನ ಗೌಡ, ಮುಳ್ಳಹಳ್ಳಿ ಮಂಜುನಾಥ, ಸಿದ್ದಪ್ಪ, ನರಸಿಂಹೇಗೌಡ, ದೇವರಾಜು, ಮಲ್ಲಿಕಾರ್ಜುನ್, ಶೋಭಾ ಇತರರು ಉಪಸ್ಥಿತರಿದ್ದರು
*(ರೈತರ ಪ್ರತಿಭಟನೆಗೆ ಪ್ಯಾಕೇಜ್)*
ಬೆಂಗಳೂರು ಹಾಲು ಒಕ್ಕೂಟಕ್ಕೆ ಲಾಭವಾದಾಗ ರೈತರಿಂದ ಪಡೆಯುವ ಹಾಲಿನ ದರವನ್ನು ಹೆಚ್ಚಿಸಲಾಗುತ್ತದೆ. ಅಂತೆಯೇ ನಷ್ಟವಾದಾಗ ಹಾಲಿನ ದರವನ್ನು ಕಡಿತಗೊಳಿಸಲಾಗುತ್ತದೆ. ಸದ್ಯದ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ ಹಾಲಿನ ದರವನ್ನು 2.ರೂ. ಕಡಿತ ಮಾಡಲಾಗಿದೆ ಎಂದು ಬಮೂಲ್ ವ್ಯವಸ್ಥಾಪಕ ಡಾ.ಶ್ರೀಧರ್ ತಿಳಿಸಿದರು.
ತಾಲೂಕಿನ ಬೈರಾಪಟ್ಟಣದ ಬಳಿ ಇರುವ ಬಮೂಲ್ ಶಿಬಿರ ಕಚೇರಿಯ ಸಭಾಂಗಣದಲ್ಲಿ ರೈತರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ರೈತರ ಕುಂದು-ಕೊರತೆ ಆಲಿಸಿ ಮಾತನಾಡಿದ ಅವರು, ಪ್ರಸ್ತತ ಬಮೂಲ್ಗೆ 67 ಕೋಟಿ ನಷ್ಟವಾಗಿದೆ. ಬಮೂಲ್ ಗೆ ಆಗುತ್ತಿರುವ ನಷ್ಟವನ್ನು ಕಡಿಮೆ ಮಾಡಲು ಹಾಲಿನ ದರವನ್ನು ಕಡಿತ ಮಾಡಲಾಗಿದೆ. ಇದರಿಂದ ಒಕ್ಕೂಟಕ್ಕೆ ಏನು ದೊಡ್ಡ ಲಾಭವಾಗುವುದಿಲ್ಲ ಎಂದು ತಿಳಿಸಿದರು.
ಒಕ್ಕೂಟಕ್ಕೆ ಬರುವ ಲಾಭದ ಹಣವನ್ನು ರೈತರ ಅಭ್ಯುದಯಕ್ಕೆ ವಿನಿಯೋಗಿಸಲಾಗುತ್ತದೆ. ರಾಸುಳಿಗೆ ವಿಮೆ, ಬಮೂಲ್ ಕಲ್ಯಾಣ ಟ್ರಸ್ಟ್ ಮೂಲಕ ಸೌಲಭ್ಯ, ರಿಯಾಯಿತಿ ದರದಲ್ಲಿ ಚಾಪ್ಕಟ್ಟರ್ ಸೇರಿದಂತೆ ಇನ್ನಿತರ ಸಲಕರಣಗಳ ವಿತರಣೆ, ಪ್ರತಿಭಾ ಪುರಸ್ಕಾರ ಸೇರಿದಂತೆ ಹಲವಾರು ಕಾರ್ಯಕ್ರಮಗಳ ಮೂಲಕ ಲಾಭದ ಹಣವನ್ನು ರೈತರ ಶ್ರೇಯೋಭಿವೃದ್ಧಿಗೆ ವಿನಿಯೋಗಿಸಲಾಗುತ್ತದೆ. ಒಕ್ಕೂಟ ಎಂದಿಗೂ ರೈತರ ಪರವಾಗಿಯೇ ಇದೆ, ಈ ಸೌಲಭ್ಯಗಳು ಬೇಡವೆಂದಾದರೆ ಹೆಚ್ಚಿನ ಲಾಭವನ್ನು ನೀಡಬಹುದಾಗಿದೆ ಎಂದು ತಿಳಿಸಿದರು.
ರೈತ ವಿರೋಧಿ ಧೋರಣೆ: ಪ್ರಸ್ತುತ ಸನ್ನಿವೇಶದಲ್ಲಿ ಹಸುಗಳನ್ನು ಸಾಕಿ, ಹೈನೋದ್ಯಮ ನಡೆಸುವುದು ಎಷ್ಟು ಕಷ್ಟಕರ ಎಂಬುದು ಅಧಿಕಾರಿಗಳಿಗೆ ಅರಿವಿಲ್ಲ. ಹಾಲಿನ ದರ ಕಡಿತದಿಂದ ಮೊದಲೇ ಬಡತನದಲ್ಲಿ ಕಷ್ಟಪಡುತ್ತಿರುವ ರೈತರ ಸಂಕಷ್ಟ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. ಬಮೂಲ್ ಅಧ್ಯಕ್ಷರು ಹಾಗೂ ವ್ಯವಸ್ಥಾಪಕರನ್ನು ಇಲ್ಲಿಗೆ ಕರೆಸಿ ನಾವು ಅವರೊಡನೆಯೇ ಮಾತುಕತೆ ನಡೆಸುತ್ತೇವೆ ಎಂದು ರೈತರು ಆಗ್ರಹಿಸಿದರು.
ಈ ವೇಳೆ ರೈತರ ಪರವಾಗಿ ತಮ್ಮ ಬೇಡಿಕೆಗಳನ್ನು ಮಂಡಿಸಿದ ಹಿರಿಯ ರೈತ ಮುಖಂಡ ಸಿ.ಪುಟ್ಟಸ್ವಾಮಿ, ರೈತರು ಪೂರೈಕೆ ಮಾಡುವ ಹಾಲಿಗೆ ವೈಜ್ಞಾನಿಕ ದರ ನಿಗದಿ ಮಾಡಬೇಕು. ಒಕ್ಕೂಟದ ಅನಾವಶ್ಯಕ ಆಡಳಿತ್ಮಾಕ ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಬಮೂಲ್ ಕಲ್ಯಾಣ ಟ್ರಸ್ಟ್ ಧರ್ಮದರ್ಶಿಗೆ ಇರುವ ಮಾರ್ಗಸೂಚಿಗಳು, ಪ್ರತಿ ಲೀಟರ್ ಹಾಲಿಗೆ ಆಗುವ ಆಡಳಿತ್ಮಾಕ ವೆಚ್ಚ, ಹಾಲು ಸಾಗಾಣಿಕೆ ವೆಚ್ಚ, ಒಕ್ಕೂಟದ 59ನೇ ಆಡಳಿತ ಮಂಡಳಿ ಸಭೆಯ ತೀರ್ಮಾನವನ್ನು ವಾಪಸ್ ಪಡೆಯಬೇಕು. ಶೇ. 3.5 ಫ್ಯಾಟ್ ಮತ್ತು ಶೇ. 8.5 0 ಎಸ್ಎನ್ಎಸ್ ಹಾಲಿಗೆ ಕನಿಷ್ಠ 40 ರೂ. ನಿಗದಿಪಡಿಸಬೇಕು. ಹಾಲಿನ ಮೇಲೆ ವಿಧಿಸುವ ಲೆವಿ ಪದ್ಧತಿಯನ್ನು ಕೈಬಿಡಬೇಕು. ಜಿಲ್ಲಾವಾರು ಪಶು ಆಹಾರ ಉತ್ಪಾದನಾ ಘಟಕ ತೆರೆಯಲು ಕ್ರಮ ವಹಿಸಬೇಕು. ಒಕ್ಕೂಟದ ನೇಮಕಾತಿ ಸಂದರ್ಭದಲ್ಲಿ ಸಹಕಾರಿ ಸಂಘದ ನೌಕರರಿಗೆ ಶೇ. 10 ಹಾಗೂ ಉತ್ಪಾದಕ ರೈತರ ಮಕ್ಕಳಿಗೆ ಶೇ. 90 ಪ್ರಮಾಣದಲ್ಲಿ ಅವಕಾಶ ನೀಡಬೇಕು, ಒಕ್ಕೂಟದ ಪ್ರಸಕ್ತ ಬೈಲಾ ತಿದ್ದುಪಡಿಗೆ ತಾಲೂಕುವಾರು ಚರ್ಚೆಗೆ ಒಳಪಡಿಸಿ ಹೈನೋಧ್ಯಮದ ರಕ್ಷಣೆಗೆ ಅಗತ್ಯ ಕ್ರಮಕ್ಕೆ ಕೈಗೊಳ್ಳಬೇಕು ಎಂಬ ಬೇಡಿಕೆಗಳನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಬಮೂಲ್ ಉಪವ್ಯವಸ್ಥಾಪಕ ಹೇಮಂತ್, ವಿಸ್ತೀರ್ಣಾಧಿಕಾರಿ ಹೊನ್ನಪ್ಪ ಪೂಜಾರ್, ಕೃಷಿ ಅಧಿಕಾರಿ ಜಿತೇಂದ್ರ ಇತರರು ಇದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು