ಪರಸ್ಪರರ ವಿರುದ್ಧ ನಗರಸಭೆ ಸದಸ್ಯರ ದೂರು
ಚನ್ನಪಟ್ಟಣ: ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರಿಬ್ಬರ ನಡುವೆ ನಡೆದ ಮಾತಿನ ಚಕಮಕಿಯ ನಂತರ ಹೊರ ಆವರಣದಲ್ಲಿ ಗಲಾಟೆ ಮಾಡಿಕೊಂಡಿದ್ದು, ಸದಸ್ಯರುಗಳ ಜೊತೆಗೆ ಅವರ ಕುಟುಂಬದವರು ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಲ್ಲದೆ, ಪಾದರಕ್ಷೆಗಳ ಮೂಲಕ ಹೊಡೆದಾಡಿಕೊಂಡಿದ್ದು, ಇಬ್ಬರು ನಗರಸಭೆ ಸದಸ್ಯರು ಪುರ ಪೋಲಿಸ್ ಠಾಣೆಗೆ ಪರಸ್ಪರರ ವಿರುದ್ಧ ದೂರು, ಪ್ರತಿದೂರು ನೀಡಿರುವ ಘಟನೆ ನಡೆದಿದೆ.
ಬುಧವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ 28ನೇ ವಾರ್ಡ್ ಮಹಿಳಾ ಸದಸ್ಯೆ ಅಬಿದಾಬಾನು ರವರ ಮಗ ಸುಹೇಲ್ ನಗರಸಭೆಗೆ ಬಂದು ತೊಂದರೆ ಕೊಡುತ್ತಿದ್ದು, ಈ ಸಂಬಂಧ ನಗರಸಭೆ ಯಲ್ಲಿ ನಡೆದ ಸಾಮಾನ್ಯ ಸಭೆಗೆ ಅರ್ಜಿ ನೀಡಿದ್ದೆ. ಸಭೆ ಮುಗಿಸಿ ಹೊರ ಹೋಗುವಾಗ ಈ ವಿಚಾರಕ್ಕೆ ಸಂಬಂಧಿಸಿದಂತೆ ನಗರಸಭೆ ಸದಸ್ಯೆಯ ಮಗ ಸುಹೇಲ್ ನನ್ನನ್ನು ತಡೆದು ಜಗಳ ತೆಗೆದು ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಇವನ ಜತೆಗೆ ಮಾಜಿ ನಗರಸಭೆ ಸದಸ್ಯ ಶಬ್ಬೀರ್ ಖಾನ್ ಹಾಗೂ ಮುಜಮ್ಮಿಲ್ ಎಂಬುವವರು ಸೇರಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆ ನಡೆಸಿದ್ದಾರೆ, ಇದೇ ಸಂದರ್ಭದಲ್ಲಿ ಸುಹೇಲ್ ಚಪ್ಪಲಿ ಕಾಲಿನಿಂದ ಒದ್ದು, ಹೊಡೆದಿದ್ದಾನೆ. ಈ ಮೂವರ ಮೇಲೂ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನಗರಸಭೆ ಸದಸ್ಯ ವಾಸೀಲ್ ಅಲಿಖಾನ್ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರತಿದೂರು: ಸಾಮಾನ್ಯ ಸಭೆಯಲ್ಲಿ ನಗರಸಭೆ ಸದಸ್ಯ ವಾಸೀಲ್ ಅಲಿಖಾನ್, ಅಧಿಕಾರದಲ್ಲಿ ಕುಟಂಬದ ಹಸ್ತಕ್ಷೇಪದ ಕುರಿತು ಆರೋಪ ಮಾಡಿ ಏರುಧ್ವನಿಯಲ್ಲಿ ಮಾತನಾಡಿದರು. ಹೊರಗೆ ಬಂದಾಗ ಆಶ್ರಯ ಬಡಾವಣೆ ವಿಚಾರದಲ್ಲಿ ತಲೆಹಾಕದಂತೆ ಬೆದರಿಸಿ, ನಿಂದಿಸಿ ಹಲ್ಲೆ ನಡೆಸಿದರು. ಈ ವಿಚಾರ ನನ್ನ ಮಗನಿಗೆ ತಿಳಿದು ಅವನು ಕೇಳಿದಾಗ ಅವನಿಗೆ ವಾಸಿಲ್ ಅಲಿಖಾನ್ಗೂ ಜಗಳವಾಗಿದ್ದು, ವಾಸೀಲ್ ಅಲಿಖಾನ್ ಮತ್ತು ಅವರ ಇಬ್ಬರು ಮಕ್ಕಳು ಸೇರಿ ನನ್ನ ಮಗನ ಮೇಲೆ ಹಲ್ಲೆ ನಡೆಸಿದ್ದು, ಕ್ರಮ ಜರುಗಿಸುವಂತೆ ನಗರಸಭೆ ಸದಸ್ಯೆ ಅಬಿದಾ ಬಾನು ಪುರಪೊಲೀಸ್ ಠಾಣೆಗೆ ಪ್ರತಿದೂರು ನೀಡಿದ್ದಾರೆ.
ಈಗಾಗಲೇ ಸುಹೇಲ್ ಎಂಬಾತನನ್ನು ಪೋಲಿಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು