ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಅಪಾರ ನಷ್ಟ
ಚನ್ನಪಟ್ಟಣ: ಮನೆಯ ಹಿಂಭಾಗ ಮೆದೆ ಹಾಕಿದ ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸರಿಸುಮಾರು ನಾಲ್ಕು ಟ್ರ್ಯಾಕ್ಟರ್ ನಷ್ಟು ಹುಲ್ಲು ಸುಟ್ಟು ಭಸ್ಮವಾಗಿರುವ ಘಟನೆ ಅಕ್ಕೂರು ಪೋಲಿಸ್ ಠಾಣಾ ವ್ಯಾಪ್ತಿಯ, ಬಲ್ಲಾಪಟ್ಟಣ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಬಲ್ಲಾಪಟ್ಟಣ ಗ್ರಾಮದ ಚೌಡೇಗೌಡರ ಪುಟ್ಟಸ್ವಾಮಿ ರವರ ಮಗ ಮನು ಎಂಬುವವರಿಗೆ ಸೇರಿದ ಶ್ರವಣಯ್ಯ ತೋಪಿನಲ್ಲಿರುವ ಮನೆಯ ಹಿಂಭಾಗ ನಾಲ್ಕು ಟ್ರ್ಯಾಕ್ಟರ್ ನಷ್ಟು ಭತ್ತದ ಹುಲ್ಲನ್ನು ಮೆದೆ ಹಾಕಿದರು. ವರ್ಷಪೂರ್ತಿ ರಾಸುಗಳಿಗೆ ಬೇಕಾದ ಹುಲ್ಲನ್ನು ಕೂಡಿಹಾಕಿದ್ದು, ಯಾರೋ ಕಿಡಿಗೇಡಿಗಳೋ ಅಥವಾ ಆಕಸ್ಮಿಕವಾಗಿಯೋ ಬೆಂಕಿ ತಗುಲಿ, ಬಣವೆ ಸಂಪೂರ್ಣವಾಗಿ ಬೆಂದುಹೋಗಿದೆ.
ತಡರಾತ್ರಿ ನಡೆದ ಈ ಘಟನೆಗೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಅಕ್ಕಪಕ್ಕದ ಮನೆಗಳಿಗೆ ಹಾಗೂ ಇನ್ನಿತರ ಆಸ್ತಿಪಾಸ್ತಿಗಳಿಗೆ ತೊಂದರೆಯಾಗುವ ಮುನ್ನವೇ ಬಹುತೇಕ ಗ್ರಾಮಸ್ಥರು ಒಗ್ಗೂಡಿ, ನೀರಿನಿಂದ ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ವಿಷಯ ತಿಳಿಸಿದರಾದರೂ, ವಾಹನ ಬರುವ ಮುಂಚೆಯೇ ಬೆಂಕಿ ನಂದಿಸಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಮಾಲೀಕ ಮನು ಮಾತನಾಡಿ, ವರ್ಷಪೂರ್ತಿ ರಾಸುಗಳಿಗೆ ಆಹಾರವಾಗಬೇಕಿದ್ದ, ಹುಲ್ಲಿನ ಬಣವೆ ಬೆಂದುಹೋಗಿದ್ದು, ತಾಲ್ಲೂಕು ಆಡಳಿತ ನಮಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು