ಪ್ರಾಧಿಕಾರ ಅಧ್ಯಕ್ಷ ಸ್ಥಾನ ದಲಿತ ಸಮುದಾಯಕ್ಕೆ ನೀಡಿ ಮುಯ್ಯಿ ತೀರಿಸಿ, ಸರ್ಕಾರಕ್ಕೆ ಆಗ್ರಹ
ಚನ್ನಪಟ್ಟಣ: ದಲಿತರು ದನಿಯಿಲ್ಲದ ಸಮುದಾಯ ಎಂಬಂತಾಗಿದೆ. ದಲಿತರಿಗೆ ಪ್ರತಿ ಹಂತದಲ್ಲೂ ಅನ್ಯಾಯವಾಗುತ್ತಿದೆ. ಅದು ತಾಲ್ಲೂಕಿನಲ್ಲಿಯೂ ಪ್ರತಿಬಿಂಬಿಸುತ್ತಿದೆ, ಕಾಂಗ್ರೆಸ್ ಸರ್ಕಾರವು ದಲಿತರಿಗೆ ನ್ಯಾಯ ಒದಗಿಸುವುದಾದರೆ, ಪ್ರಾಧಿಕಾರದ ಅಧ್ಯಕ್ಷ ಹಾಗೂ ರಾಜ್ಯದಲ್ಲಿ ಎರಡು ನಿಗಮಗಳಿಗೆ ನೇಮಕ ಮಾಡುವ ಮೂಲಕ ದಲಿತರಿಗೆ ಮುಯ್ಯಿ ತೀರಿಸಿ ಎಂದು ದಲಿತ ಮುಖಂಡ, ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯ ಮತ್ತೀಕೆರೆ ಹನುಮಂತಯ್ಯ ಒತ್ತಾಯಿಸಿದರು. ಅವರು ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಸಮುದಾಯದ ಮುಖಂಡರೊಂದಿಗೆ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ತಾಲ್ಲೂಕಿನಲ್ಲಿ ದಲಿತ ಸಮುದಾಯ ಎಲ್ಲಾ ರೀತಿಯಲ್ಲೂ ಹಿಂದುಳಿದಿದೆ. ಆಳುವ ಸರ್ಕಾರಗಳು ನಮ್ಮ ಜೊತೆಗಿಲ್ಲ. ಮಾನ್ಯ ಸಂಸದರಾದ ಡಿ ಕೆ ಸುರೇಶ್ ಉತ್ತಮ ನಾಯಕರು, ಆದರೆ ನಮ್ಮ ತಾಲ್ಲೂಕಿಗೆ, ಅದರಲ್ಲೂ ದಲಿತ ಸಮುದಾಯಕ್ಕೆ ಅವರ ಕೊಡುಗೆ ಶೂನ್ಯವಾಗಿದೆ. ಅಂಬೇಡ್ಕರ್ ಭವನದ ವಿಷಯವಾಗಿ ಕೇವಲ ಭರವಷೆಯನ್ನಿತ್ತು ಹೋಗಿದ್ದಾರೆ ವಿನಹ ಮುಂದಡಿ ಇಟ್ಟಿಲ್ಲ. ನಿಮ್ಮ ಸಹೋದರ ಡಿ ಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿದ್ದು ಅವರ ಮುಖೇನ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಎಂದರೆ ಸಾಮಾಜಿಕ ನ್ಯಾಯ, ದಲಿತರ ಪರ ಎಂದು ಹೇಳುತ್ತೀರಿ, ಆದರೆ ನೀವು ಸಂಘದ ಪರ ನಿಲ್ಲುತ್ತೀರಿ, ನೀವು ಸಂಘದ ಪರ ನಿಲ್ಲಿ ನೀವು ಸಾಂವಿಧಾನಿಕ ಹುದ್ದೆಯಲ್ಲಿಲ್ಲದಾಗ ನಿಲ್ಲಿ. ಸಾಮಾಜಿಕ ನ್ಯಾಯ ದ ಪರ ನೀವು ನಿಂತಿದ್ದೇ ಆದರೆ ನಮಗೆ ನ್ಯಾಯ ಕೊಡಿ. ಜನಗಣತಿ ವಿಷಯದಲ್ಲಿ ಜನಗಣತಿ ಬಿಡುಗಡೆ ಬೇಡಾ ಎಂದು ಒಕ್ಕಲಿಗರ ಸ್ವಾಮೀಜಿ ಜೊತೆ ಸಹಿ ಮಾಡಿದ್ದೀರಿ. ಓರ್ವ ಸಾಂವಿಧಾನಿಕ ಹುದ್ದೆಯಲ್ಲಿರುವವರು ಸಹಿ ಮಾಡಿರುವುದನ್ನು ನಾವು ಖಂಡಿಸುತ್ತೇವೆ. ಪ್ರಮಾಣ ವಚನ ಸ್ವೀಕಾರ ಮಾಡುವಾಗ ಯಾವುದೇ ಜಾತಿ, ಮತ ನೋಡದೆ ನ್ಯಾಯಪರ ನಿಲ್ಲುತ್ತೇವೆ ಎನ್ನುವ ನೀವು ಒಂದು ಸಮುದಾಯದ ಪರ ನಿಲ್ಲುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಚನ್ನಪಟ್ಟಣ ತಾಲ್ಲೂಕಿನ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಖಾಲಿ ಇದೆ. ಇದೂವರೆಗೂ ದಲಿತರು ಅಧ್ಯಕ್ಷರಾಗಿಲ್ಲ. ದಲಿತರು ಎಲ್ಲೂ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಬಾರದೆಂದಿಲ್ಲ. ಈ ಬಾರಿ ಕಾಂಗ್ರೆಸ್ ಸರ್ಕಾರ ನ್ಯಾಯಪರವಾಗಿದ್ದರೆ ದಲಿತರಿಗೆ ಅಧ್ಯಕ್ಷ ಸ್ಥಾನ ಕಲ್ಪಿಸಿ. ರಾಜ್ಯದಲ್ಲೂ ಸಹ ದಲಿತರಿಗೆ ಉತ್ತಮ ಸ್ಥಾನ ದೊರೆತಿರುವುದು ಬಹಳ ಕಡಿಮೆಯಾಗಿದೆ ಎಂದರು.
ನೀವು ನಮಗೆ ಮುಯ್ಯಿ ನೀಡಿ, ನಾವು ಈಗಾಗಲೇ ನಿಮಗೆ ಮೂರು ಬಾರಿ ಮುಯ್ಯಿ ನೀಡಿದ್ದೇವೆ. ಮುಂದೆಯೂ ನಿಮಗೆ ಮುಯ್ಯಿ ತೀರಿಸುತ್ತೇವೆ. ತಾಲ್ಲೂಕಿನಲ್ಲಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ರಾಜ್ಯದಲ್ಲಿ ಇಬ್ಬರಿಗಾದರೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ, ದಲಿತರು ಮತ್ತು ಮುಸ್ಲಿಮರು ನಮ್ಮ ಪರ ಇದ್ದಾರೆ. ಅವರು ನಮಗೆ ಮತ ನೀಡುತ್ತಾರೆ ಎಂಬ ಭ್ರಮೆ ಬೇಡ, ಮತ ಯಂತ್ರದಲ್ಲಿ ನೋಟಾ ಎಂಬುದು ಒಂದಿದೆ ಎಂಬುದನ್ನು ಮರೆಯಬೇಡಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಪ್ಪಗೆರೆ ಶ್ರೀನಿವಾಸ್, ಮಲ್ಲುಂಗೆರೆ ಮಹದೇವ, ಮೈಲನಾಯಕನಹಳ್ಳಿ ಕೃಷ್ಣಯ್ಯ ಎ ಸಿ, ಜಗದೀಶ್, ಶ್ರೀನಿವಾಸ್ ಮತ್ತೀಕೆರೆ, ವಿಜಯಕುಮಾರ್, ಪುರುಷೋತ್ತಮ ಸೇರಿದಂತೆ ಹಲವಾರು ದಲಿತ ಮುಖಂಡರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು