ಜನತಾಬಜಾರ್ ಗೆ ವರ್ಗಾವಣೆಗೊಂಡ ಅಂಗನವಾಡಿ ಆಹಾರ, ಹಸಿರು ನಿಶಾನೆ ತೋರದ ಅಧಿಕಾರಿ ವರ್ಗ
ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ ಬೇಕಾಗುವ ಆಹಾರ ಸಾಮಾಗ್ರಿಗಳನ್ನು ಎಂ ಎಸ್ ಪಿ ಟಿ ಸಿ ಸಂಘವು ಈಗ ಬೆಂಗಳೂರು ಎಪಿಎಂಸಿ ಸೇರಿದಂತೆ ಅನೇಕ ಸ್ಥಳೀಯ ಸಂಸ್ಥೆಗಳಿಂದ ಖರೀದಿಸುವ ಬದಲು ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾ ಮಂಡಳ ನಿಯಮಿತ ಬೆಂಗಳೂರು (ಜನತಾಬಜಾರ್) ನಿಂದ ಖರೀದಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಸಂಬಂಧಿಸಿದ ಸಂಸ್ಥೆಗೆ ಸರ್ಕಾರ ಆದೇಶ ನೀಡಿ ತಿಂಗಳು ಕಳೆದಿದ್ದರೂ ಸಹ ಅಧಿಕಾರಿಗಳು ಮೀನ ಮೇಷ ಎಣಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಮೂಡಿದೆ.
ಅಂಗನವಾಡಿ ಶಿಶುಗಳಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂಬ ಮಾಧ್ಯಮ ವರದಿಗಳ ನಂತರ ಎಚ್ಚೆತ್ತ ಸರ್ಕಾರವು ಸರ್ಕಾರದ ಪತ್ರ ಸಂಖ್ಯೆ, ಸರ್ಕಾರದ ಆದೇಶ ಸಂಖ್ಯೆ ಮ ಮ ಇ ೩೦೨ ಐಸಿಡಿ ೨೦೧೪ ರ ಮರು ಆದೇಶ ಮ ಮ ಇ ೩೦೩ ಐಸಿಡಿ ೨೦೧೮ ರ ಅಡಿ ದಿನಾಂಕ ೨೪/೦೨/೨೦೧೮ ರಂದು ಬೇಳೆ ಮತ್ತು ಇನ್ನಿತರ ಕಾಳುಗಳನ್ನು ಕರ್ನಾಟಕ ರಾಜ್ಯ ಆಹಾರ ಸರಬರಾಜು ನಿಗಮದಿಂದ ಮತ್ತು ಅಕ್ಕಿ, ಗೋಧಿ ಮತ್ತು ಎಣ್ಣೆಯನ್ನು ಹೊರತುಪಡಿಸಿ ಉಳಿದ ಆಹಾರ ಪದಾರ್ಥಗಳನ್ನು ಜನತಾಬಜಾರ್ ನಿಂದ ಖರೀದಿಸಲು ಆದೇಶ ನೀಡಿದೆ.
ಎಂ ಎಸ್ ಪಿ ಟಿ ಸಿ ಸಂಘದ ಯೂನಿಯನ್ ನ ಅನೇಕ ಜಿಲ್ಲೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಚುನಾವಣಾ ನೀತಿ ಸಂಹಿತೆಯಿದ್ದರೂ ಸಹ ಪ್ರತಿಭಟನೆ ನಡೆಸಿದ್ದು ಚುನಾವಣಾ ಆಯೋಗವು ಸಹ ಇಲಾಖೆಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಯಾರದೋ ಒತ್ತಡಕ್ಕೆ ಅಥವಾ ರಾಜಕೀಯ ಲಾಭಕ್ಕಾಗಿ ಈ ರೀತಿಯ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿದೆ ಎಂದು ಎಂ ಎಸ್ ಪಿ ಟಿ ಸಿ ಯ ಆರೋಪವಾದರೆ ಕಳಪೆ ಗುಣಮಟ್ಟದ ಆಹಾರ ನೀಡುತ್ತಿದ್ದಾರೆ ಆದ್ದರಿಂದ ಸಂಸ್ಥೆ ಬದಲಿಸಿ ಎಂದು ತಿಂಗಳ ಹಿಂದೆ ಆದೇಶ ನೀಡಿದ್ದರೂ ಸಹ ಅಧಿಕಾರಿಗಳು ಕಿಮ್ಮತ್ತು ನೀಡದಿರುವುದು ಏಕೆ ಎಂದು ಜನತಾಬಜಾರ್ ನವರ ಪ್ರಶ್ನೆಯಾಗಿದೆ.
ಏನೇ ಆಗಲಿ ಮಕ್ಕಳ ಆರೋಗ್ಯ ದೃಷ್ಟಿಯಿಂದ ಅಧಿಕಾರಿಗಳು ಶೀಘ್ರವಾಗಿ ಕ್ರಮಕೈಗೊಳ್ಳಬೇಕಾಗಿದೆ.
ಈ ಗೊಂದಲದ ಬಗ್ಗೆ ರಾಮನಗರ ಜಿಲ್ಲೆಯ ಸಹಾಯಕ ನಿರ್ದೇಶಕ ದಿಲೀಪ್ ದೇವಣ್ಣ ನವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕಿ ಅರುಂಧತಿ ಯವರು ೨೨/೦೩/೨೦೧೯ ರಂದು ಆದೇಶ ಹೊರಡಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ, ಇದು ಚುನಾವಣಾ ಸಮಯ ಆಗಿರುವುದರಿಂದ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿಲ್ಲ, ಹದಿನೆಂಟನೇ ತಾರೀಖಿನ ನಂತರ ಸರ್ಕಾರದ ಆದೇಶವನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳಲಾಗುವುದೆಂದು ತಿಳಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು