ಫೋನಿ ಚಂಡಮಾರುತದ ಗಾಳಿ ಮಳೆಗೆ ಮಕಾಡೆ ಮಲಗಿದ ವೀಳ್ಯದೆಲೆ ತೋಟ, ಮಣ್ಣಾದ ರೈತನ ಬದುಕು
ಚನ್ನಪಟ್ಟಣ,: ನಿನ್ನೆ ಸಂಜೆ ಬೀಸಿದ ಫೋನಿ ಚಂಡಮಾರುತದಿಂದ ತಾಲ್ಲೂಕಿನ ಅನೇಕ ರೈತರ ಬದುಕು ಮಣ್ಣಾಗಿ ಹೋಗಿದೆ, ತಾಲ್ಲೂಕಿನ ಎಲೆ ಭೂಹಳ್ಳಿ ಎಂದೇ ಹೆಸರುವಾಸಿಯಾದ ಭೂಹಳ್ಳಿ ಗ್ರಾಮದ ಅನೇಕ ರೈತರ ವೀಳ್ಯದೆಲೆ ತೋಟಗಳು, ಹುಲುಸಾಗಿ ಬೆಳೆದ ಬಾಳೆ ಗಿಡಗಳು, ತೆಂಗಿನ ಮರಗಳು ಬುಡ ಸಮೇತ ಉರುಳಿ ಬಿದ್ದಿದ್ದು ರೈತರ ಕಣ್ಣಲ್ಲಿ ನೀರು ಹರಿಯುವಂತೆ ಮಾಡಿದೆ.
ಈಗಾಗಲೇ ಮಾವಿನ ಹಣ್ಣು ಬಹುತೇಕ ಕಟಾವು ಆಗಿದ್ದು, ಇರುವ ಕಾಯಿಗಳು ನೆಲಕಚ್ಚಿವೆ, ಹತ್ತಾರು ಮೀಟರ್ ಎತ್ತರಕ್ಕೆ ಹಬ್ಬಿಸಿದ್ದ ವೀಳ್ಯದೆಲೆ ಹಂಬುಗಳು ಊರುಗೋಲಾಗಿ ಬೆಳೆಸಿದ್ದ, ನುಗ್ಗೆಮರಗಳು, ಅಗಚೆ, ಇನ್ನಿತರ ಮರಗಳ ಸಮೇತ ನೆಲಕ್ಕುರುಳಿದ್ದು ಇಂದು ಬೆಳಿಗ್ಗೆ ಮನೆಮಂದಿಯೆಲ್ಲರೂ ತೆರವುಗೊಳಿಸಿ ಅಳದುಳಿದ ಹಂಬುಗಳನ್ನು ಎತ್ತಿ ನಿಲ್ಲಿಸಲು ಹರಸಾಹಸ ಪಡುತ್ತಿದ್ದರು.
ಕೊಯ್ಲಿಗೆ ಬಂದ ಬಾಳೆ ಗಿಡಗಳು ಒಂದರ ಮೇಲೊಂದು ಬುಡ ಸಮೇತ ಬಿದ್ದು ಅತ್ತ ಕಾಯಿ ಅಲ್ಲದೇ ಇತ್ತ ಹಣ್ಣು ಆಗದಿರುವ ರೀತಿಯ ೩೦/೪೦ ಕಿಲೋ ತೂಗುವ ಬಾಳೆ ಗಿಡಗಳು ಬಿದ್ದು ರೈತನ ಬದುಕು ಮೂರಾಬಟ್ಟೆಯಾಗಿವೆ.
ಫಲ ನೀಡುತ್ತಿದ್ದ ತೆಂಗಿನ ಮರಗಳು ಕೆಲವು ಬುಡಸಮೇತ ಬಿದ್ದಿದ್ದರೇ ಮತ್ತು ಕೆಲವು ಅರ್ಧಕ್ಕೆ ಮುರಿದು ಬಿದ್ದಿವೆ, ಗಾಳಿಯ ಹೊಡೆತಕ್ಕೆ ಅನೇಕ ರೀತಿಯ ಮರಗಳು ಸಹ ಬಿದ್ದು ಅನ್ನದಾತನ ತಟ್ಟೆಗೆ ಮಣ್ಣು ಬಿದ್ದಿದೆ.
ಒಂದು ಕಡೆ ಕಾಡಾನೆಗಳ ಹಾವಳಿ, ವಿದ್ಯುತ್ ಕಣ್ಣಾಮುಚ್ಚಾಲೆ, ಇತ್ತೀಚೆಗೆ ಕುಸಿಯುತ್ತಿರುವ ಅಂತರ್ಜಲ ಮತ್ತು ವ್ಯವಸಾಯಕ್ಕೆ ಸಿಗದ ಕೂಲಿ ಕಾರ್ಮಿಕರು ಇವೆಲ್ಲದರ ನಡುವೆ ಬೆಳೆದ ಫಸಲು ಅತಿವೃಷ್ಟಿಯಿಂದ ಹೀಗಾದಾಗ *ವ್ಯವಸಾಯ ಎಂದರೆ ಮನೆ ಮಂದಿಯೆಲ್ಲಾ ಸಾಯ* ಎಂಬ ನಾಣ್ಣುಡಿ ಸತ್ಯ ಎಂಬುದು ಸಾಬೀತಾಗುತ್ತದೆ.
ಕೇಂದ್ರದಲ್ಲಾಗಲಿ, ರಾಜ್ಯದಲ್ಲಾಗಲಿ ರೈತನ ಬದುಕು ಹಸನು ಮಾಡುವಂತಹ ಕೃಷಿ ನೀತಿ ಇಲ್ಲದಿರುವುದು, ರೈತನ ಹೆಸರಿನಲ್ಲಿ ಅಧಿಕಾರ ಹಿಡಿಯುವ ರಾಜಕಾರಣಿಗಳ ಗೋಸುಂಬೆತನವನ್ನು ತೋರಿಸುತ್ತದೆ.
ರೈತರ ಹೆಸರೇಳಿಕೊಂಡು ಅಧಿಕಾರ ಹಿಡಿಯಲು ಹೊಂಚು ಹಾಕಿ ಸುಳ್ಳು ಭರವಸೆ ಕೊಟ್ಟು ನಂತರ ಮರೆಯುವ ಎಲ್ಲಾ ಪಕ್ಷದ *ಮಣ್ಣಿನ ಮಕ್ಕಳು* ಈಗ ಉಂಟಾಗಿರುವ ನಷ್ಟ ಭರಿಸುವುದರ ಜೊತೆಗೆ ಉತ್ತಮ ಕೃಷಿ ನೀತಿಯನ್ನು ತಜ್ಞರು ಮತ್ತು ರೈತರ ಜೊತೆ ಚರ್ಚಿಸಿ ಅನ್ನದಾತನ ಬದುಕು ಹಸನವಾಗುವಂತೆ ಮಾಡಲು ಆಸಕ್ತಿ ತೋರಲಿ.
ಗೋ ರಾ ಶ್ರೀನಿವಾಸ...
ಮೊ9845956139.
ಪ್ರತಿಕ್ರಿಯೆಗಳು