ತಾಲ್ಲೂಕು ಆಡಳಿತ ನಿರ್ಲಕ್ಷ್ಯ, ರೈತ ಸಂಘ ಪ್ರತಿಭಟನೆ
ಚನ್ನಪಟ್ಟಣ: ತಾಲ್ಲೂಕು ಆಡಳಿತವು ನಿರ್ಲಕ್ಷ್ಯ ಮತ್ತು ನಿರ್ಲಜ್ಯದಿಂದ ಕೂಡಿದ್ದು ತಾಲ್ಲೂಕು ಆಡಳಿತವನ್ನು ಚುರುಕುಗೊಳಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ರವರ ನೇತೃತ್ವದಲ್ಲಿ ರಾಮನಗರ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಪದಾಧಿಕಾರಿಗಳು ಹಾಗೂ ಎತ್ತಿನ ಬಂಡಿಗಳ ಸಮೇತ ಗಾಂಧಿಭವನದಿಂದ ಮೆರವಣಿಗೆ ಹೊರಟು ತಾಲ್ಲೂಕು ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಕಂದಾಯ ಇಲಾಖೆಯ ಅಧಿಕಾರಿಗಳ ಕಿರುಕುಳ, ವಿದ್ಯುತ್ ಇಲಾಖೆಯಿಂದ ಅಸಮರ್ಪಕ ವಿದ್ಯುತ್, ಕೃಷಿ ಉತ್ಪನ್ನಗಳ ಆಯೋಗ ರಚನೆಯಿಂದ ವರದಿ ಬಾರದಿರುವುದು, ಪರವಾನಗಿ ಇಲ್ಲದೆ ಎಲ್ಲೆಂದರಲ್ಲಿ ಮದ್ಯ ಮಾರಾಟ, ನರೇಗಾ ಕಾಮಗಾರಿಗಳಲ್ಲಿ ಆಗುತ್ತಿರುವ ಅನ್ಯಾಯ, ಎಪಿಎಂಸಿಯಲ್ಲಿ ಕಮಿಷನ್ ದಂಧೆ, ಕೆರೆ ಏರಿಗಳ ಮೇಲೆ ಕೋಳಿತ್ಯಾಜ್ಯ, ಬರಪೀಡಿತ ತಾಲ್ಲೂಕು ಘೋಷಣೆ ಆಗಿದ್ದರೂ ಪರಿಹಾರ ಕಲ್ಪಿಸಿದರಿವುದು, ವೈದ್ಯಾಧಿಕಾರಿಗಳ ಕೊರತೆ, ರೈತರ ಸಾಲಮನ್ನಾ ಬಗ್ಗೆ ಶ್ವೇತ ಪತ್ರ, ಕಾಡುಪ್ರಾಣಿಗಳಿಂದ ಆಗುತ್ತಿರುವ ತೊಂದರೆ, ಕಣ್ವ ನೀರಾವರಿ ಕಾಮಗಾರಿಗಳ ಅಕ್ರಮ ಮತ್ತು ಕೆರೆ ನೀರು ತುಂಬಿಸುವುದು, ಬ್ಯಾಂಕ್ ಗಳಲ್ಲಿ ರೈತರ ಒಡವೆ ಸಾಲ ನವೀಕರಣ, ಎಲ್ಲಾ ರೈತರಿಗೂ ಜನಶ್ರೀ ಯೋಜನೆ, ಹಾಗೂ ಗ್ರಾಮಗಳಲ್ಲಿ ಗುಂಡುತೋಪು, ಕೆರೆಕುಂಟೆ ಸರ್ಕಾರಿ ಸ್ಮಶಾನಗಳು, ರಸ್ತೆ ಒತ್ತುವರಿ ಹೀಗೆ ಹಲವಾರು ವಿಷಯಗಳನ್ನು ತನಿಖೆ ಮಾಡಿಸಿ ಶೀಘ್ರವಾಗಿ ಪರಿಹಾರ ಕಲ್ಪಿಸಬೇಕೆಂದು ಪ್ರತಿಭಟಿಸಿದರು.
ತಾಲ್ಲೂಕು ಕಛೇರಿ ಮುಂದೆ ಪ್ರತಿಭಟಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮುಖ್ಯಮಂತ್ರಿ ಕ್ಷೇತ್ರದಲ್ಲೇ ತಾಲ್ಲೂಕು ಆಡಳಿತ ಸಂಪೂರ್ಣ ಹದಗೆಟ್ಟಿದೆ ಎಂದಾದರೆ ರಾಜ್ಯದ ೨೨೪ ಕ್ಷೇತ್ರದ ಸಮಸ್ಯೆಗಳು ಎಷ್ಟಿರಬಹುದು ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಹೂಡುವುದಾಗಿ ಘೋಷಿಸಿದ್ದಾರೆ ಸಂತೋಷ, ಅದರಲ್ಲೂ ಸರ್ಕಾರಿ ಶಾಲೆಗಳಲ್ಲಿ ವಾಸ್ತವ್ಯ ಹೂಡುವುದಾಗಿ ಪ್ರಕಟಿಸಿದ್ದಾರೆ, ರಾಜ್ಯಾದ್ಯಂತ ೧,೦೦೦ ಶಾಲೆಗಳನ್ನು ಮುಚ್ಚುವುದಾಗಿ ಹೇಳಿರುವ ಮುಖ್ಯಮಂತ್ರಿಗಳು ಶಾಲೆಯಲ್ಲಿ ವಾಸವ್ಯ ಹೂಡುವುದು ಹಾಸ್ಯಾಸ್ಪದ ಎಂದರು, ಗ್ರಾಮ ವಾಸ್ತವ್ಯ ರಾಜಕೀಯ ಇಲ್ಲದೆ ಪ್ರಾಮಾಣಿಕತೆಯಿಂದ ಮಾಡಬೇಕು, ಹಿಂದಿ ಹೇರಿಕೆ, ಪಹಣಿಯಿಂದ ಆಗುತ್ತಿರುವ ತೊಂದರೆ, ಸರ್ಕಾರಿ ಶಾಲೆ ಉಳಿಸುವ, ರೈತರ ಸಂಪೂರ್ಣ ಸಾಲಮನ್ನಾ ಮಾಡುವಂತೆ ಮತ್ತು ಕಾವೇರಿ ಪ್ರಾಧಿಕಾರವನ್ನು ಸಮರ್ಥವಾಗಿ ಮುನ್ನಡೆಸುವಂತೆ ಅವರು ಆಗ್ರಹಿಸಿದರು.
ರಾಜ್ಯ ರೈತಸಂಘದ ಉಪಾಧ್ಯಕ್ಷ ಎಂ ರಾಮು ಮಾತನಾಡಿ ಕಳೆದ ಇಪ್ಪತ್ತು ವರ್ಷಗಳಿಂದ ಕಣ್ವ ಕೆರೆಯಿಂದ ನೀರು ಹರಿಸಿಲ್ಲ, ಅನೇಕ ರೈತರು ವ್ಯವಸಾಯವನ್ನೇ ಮರೆಯುತ್ತಿದ್ದಾರೆ, ನಾಲೆಗೆ ಸಂಬಂಧಿಸಿದಂತೆ ಅನುಮತಿ ದೊರೆತಿದ್ದು ಯಾವ ಅಧಿಕಾರಿಗಳನ್ನು ಕೇಳಿದರೂ ಸಬೂಬು ಹೇಳುತ್ತಾರೆ ಎಂದು ದೂರಿದರು, ಮುಖ್ಯಮಂತ್ರಿ ಕ್ಷೇತ್ರದಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದ್ದು ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ರೈತರ ಕೆಲಸಗಳನ್ನು ಲಂಚರುಸುವತ್ತಿಗಳಿಲ್ಲದೇ ಜರೂರು ಮಾಡಿಕೊಡಲು ನಿರ್ದೇಶನ ಮಾಡುವಂತೆ ಆಗ್ರಹಿಸಿದರು.
ಜಿಲ್ಲಾ ಕಸಾಪ ದ ನಿಕಟಪೂರ್ವ ಅಧ್ಯಕ್ಷ ಬಿ ಟಿ ನಾಗೇಶ್ ಅತೀವ ನೋವಿನಿಂದ ಮಾತನಾಡಿ ರೈತರ ಅವನತಿಗಳಿಗೆ ಅಧಿಕಾರಿಗಳೇ ನೇರ ಕಾರಣ, ಕೈತುಂಬಾ ಸಂಬಳ ಪಡೆಯುವ ಅಧಿಕಾರಿಗಳು ರೈತರನ್ನು ನಿರ್ದಾಕ್ಷಿಣ್ಯವಾಗಿ ಕಾಣುತ್ತಿರುವುದು ದುರದೃಷ್ಟಕರ ಎಂದು ವಿಷಾದಿಸಿದರು.
ಹೋರಾಟಗಾರ ಶಂಭೂಗೌಡ ಮಾತನಾಡಿ ಖಾಸಗಿ ಶಾಲೆಯಲ್ಲಿ ಆರ್ ಟಿ ಇ ಮಕ್ಕಳು ಮತ್ತು ಸರ್ಕಾರಿ ಶಾಲೆಗಳ ಬಗ್ಗೆ ಇರುವ ತಾತ್ಸಾರ ಮನೋಭಾವ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ದ ಬಗ್ಗೆ ಮಾತನಾಡಿದರು.
ಜಿ ಟಿ ರಾಮಸ್ವಾಮಿ, ರಾಮನಗರ ಜಿಲ್ಲಾ ಅಧ್ಯಕ್ಷ ಮಲ್ಲಯ್ಯ, ಮಾಗಡಿ ತಾಲ್ಲೂಕು ಅಧ್ಯಕ್ಷ ಲೋಕೇಶ್, ಮುನಿರಾಜು ಸುಕನ್ಯಾ ಮತ್ತಿತರ ಪದಾಧಿಕಾರಿಗಳು ಮಾತನಾಡಿದರು.
ತಾಲ್ಲೂಕು ಆಡಳಿತದ ಹನ್ನೆರಡು ಇಲಾಖೆಗಳಾದ ಕಂದಾಯ, ತಾಲ್ಲೂಕು ಪಂಚಾಯತಿ, ಕುಡಿಯುವ ನೀರು, ವಾಣಿಜ್ಯ ತೆರಿಗೆ, ಕೃಷಿ ಮಾರುಕಟ್ಟೆ, ಅರಣ್ಯ, ಕೃಷಿ, ತೋಟಗಾರಿಕೆ, ನೋಂದಣಿ, ಟ್ರಜರಿ, ಪಶುಸಂಗೋಪನೆ ಮತ್ತು ಕೆಎಂಎಫ್ ಅಧಿಕಾರಿಗಳು ಸ್ಥಳಕ್ಕೇ ಭೇಟಿ ನೀಡಿ ರೈತರ ಅಹವಾಲುಗಳನ್ನು ಸ್ವೀಕರಿಸಿದರು, ಶಿರಸ್ತೇದಾರರು ಮಾತನಾಡಿ ನಿಮ್ಮೆಲ್ಲ ಬೇಡಿಕೆಗಳನ್ನು ಒಂದು ಪಟ್ಟಿ ಮಾಡಿಕೊಡಿ ಆ ಪಟ್ಟಿಯ ಮೂಲಕ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸಭೆ ಕರೆದು ಮುಂದಿನ ದಿನಗಳಲ್ಲಿ ಎಲ್ಲಾ ರೈತರ ಕೆಲಸಗಳನ್ನು ಶೀಘ್ರವಾಗಿ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಈ ನಡುವೆ ಅಧಿಕಾರಿಗಳ ಉತ್ತರದಿಂದ ಸಂತೃಪ್ತರಾಗದ ಪದಾಧಿಕಾರಿಗಳು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಶಿರಸ್ತೇದಾರರು ಮಾತನಾಡಿ ಎಲ್ಲಾ ಅಧಿಕಾರಿಗಳನ್ನು ಸಭೆ ಕರೆದು ಚರ್ಚಿಸಿ ತಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು