ಹಗಲಿರುಳೆನ್ನದೆ ಪ್ರಾಮಾಣಿಕವಾಗಿ ದುಡಿಯುವ ಪತ್ರಕರ್ತರಿಗೆ ಸರ್ಕಾರ ಸ್ಪಂದಿಸಬೇಕು ಸು ತ ರಾಮೇಗೌಡ
ಚನ್ನಪಟ್ಟಣ: ಹಗಲಿರುಳೆನ್ನದೆ ಅವಶ್ಯಕತೆ ಇದ್ದಾಗ ದಿನದ ಇಪ್ಪತ್ತನಾಲ್ಕು ಗಂಟೆಗಳು ಸಹ ಧೈರ್ಯ ಗುಂದದೆ ಪ್ರಾಮಾಣಿಕವಾಗಿ ಬರೆಯುವ ಪತ್ರಕರ್ತರ ಶ್ರೇಯೋಭಿವೃದ್ದಿಗೆ ಸರ್ಕಾರ ಸ್ಪಂದಿಸಿದರೇ ಇನ್ನೂ ಹೆಚ್ಚು ಕ್ರಿಯಾಶೀಲರಾಗಬಹುದು ಎಂದು ಹಿರಿಯ ಪತ್ರಕರ್ತ ಬಯಲು ಸೀಮೆ ಸಂಜೆ ದಿನ ಪತ್ರಿಕೆಯ ಸಂಪಾದಕ ಸು ತ ರಾಮೇಗೌಡ ಅಭಿಪ್ರಾಯ ಪಟ್ಟರು.
ಅವರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಮಾಜಿ ಅಧ್ಯಕ್ಷ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಯ ರಾಜ್ಯಾಧ್ಯಕ್ಷ, ರೇಷ್ಮೆ ಸೀಮೆ ಪತ್ರಿಕೆಯ ಸಂಪಾದಕ ರಮೇಶ್ ಗೌಡ ರ ನೇತೃತ್ವದಲ್ಲಿ ನಡೆದ *ಪತ್ರಿಕಾ ದಿನಾಚರಣೆಯ* ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮ ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವರದಿಗಾರರಿಗೆ ಕೈ ತುಂಬಾ ಸಂಬಳ ಇದ್ದರೆ ಹೆಚ್ಚು ಪ್ರಾಮಾಣಿಕವಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ, ಆದರೆ ಪ್ರಾಮಾಣಿಕವಾಗಿ ಪತ್ರಿಕೆ ನಡೆಸುವುದೇ ದುಸ್ತರವಾಗಿರುವಾಗ ವರದಿ ನಿರೀಕ್ಷಿಸುವುದು ಕಷ್ಟವಾಗಿದೆಯಾದರೂ ಹಲವು ಪತ್ರಕರ್ತರು ರಾಜಿಯಾಗದೇ ಸುದ್ದಿ ಮಾಡುತ್ರಿರುವುದು ಶ್ಲಾಘನೀಯ ಹಾಗೂ ಪತ್ರಿಕಾ ದಿನಾಚರಣೆಯ ಅಂಗವಾಗಿ ಪತ್ರಕರ್ತರನ್ನು ಸನ್ಮಾನಿಸುತ್ತಿರುವ ಸಂಘಟನೆಯ ಪದಾಧಿಕಾರಿಗಳು ಸಹ ಅಭಿನಂದನಾರ್ಹರು ಎಂದರು.
ಕಕಜವೇ ರಾಜ್ಯಾಧ್ಯಕ್ಷ ರಮೇಶ್ ಗೌಡ ಮಾತನಾಡಿ ಸುದ್ದಿ ಮಾಡುವುದು ಎಂದರೆ ಸುಲಭದ ಕೆಲಸವಲ್ಲ, ಒಂದು ಸುದ್ದಿ ಬರೆಯಬೇಕಾದರೇ ಅದರ ಮೂಲ ದಾಖಲೆ, ಹಾಗೂ ವಸ್ತುಗಳನ್ನು ಪಡೆದು ವಸ್ತುನಿಷ್ಠವಾಗಿ ಬರೆಯಬೇಕಾಗುತ್ತದೆ, ಕೆಲವು ಬಾರಿ ಪತ್ರಕರ್ತರು ಸಂಕಷ್ಟಗಳಿಗೆ ಸಿಲುಕಿಕೊಂಡಿರುವ ಉದಾಹರಣೆಗಳಿವೆ, ಇಂತಹ ಪತ್ರಕರ್ತರಿಗೆ ನಮ್ಮ ಸಂಘಟನೆಯ ವತಿಯಿಂದ ಸನ್ಮಾನ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ದೃಶ್ಯ ಮಾಧ್ಯಮದ ಹಿರಿಯ ಕ್ಯಾಮೆರಾಮನ್ ಗುರುಮೂರ್ತಿ ಮತ್ತು ಸಮಯ ಟಿವಿ ಜಿಲ್ಲಾ ವರದಿಗಾರ ನಟರಾಜ್ ಮಾತನಾಡಿದರು.
ಬಯಲುಸೀಮೆ ಪತ್ರಿಕೆಯ ವರದಿಗಾರ ಗೋ ರಾ ಶ್ರೀನಿವಾಸ, ಕ್ರಾಂತಿರಂಗ ಪತ್ರಿಕೆಯ ಸಂಪಾದಕ ಡಿ ಟಿ ತಿಲಕರಾಜು, ಕಲಾಪ್ರಿಯ ಪತ್ರಿಕೆ ಯ ಸಂಪಾದಕಿ ಸುಧಾರಾಣಿ, ಕರ್ನಾಟಕ ಆವಾಜ್ ಉರ್ದು ಪತ್ರಿಕೆಯ ಸಂಪಾದಕ ಕರೀಂ, ಇನ್ನಿತರ ಪತ್ರಿಕೆಯ ವರದಿಗಾರರಾದ ಎಲೇಕೇರಿ ಮಂಜು, ಕುಮಾರ್, ಬಿಟಿವಿ ರವಿ, ಕೃಷ್ಣಮೂರ್ತಿ ಸೇರಿದಂತೆ ಅನೇಕ ಪತ್ರಕರ್ತರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್ ಗೌಡ, ಮಳೂರುಪಟ್ಟಣ ರವಿ, ರೇಷ್ಮೆ ಸೀಮೆ ಪತ್ರಿಕೆಯ ಶಂಕರ್, ಬೋರ್ ವೆಲ್ ರಂಗನಾಥ , ಅಕ್ಕೂರು ರಮೇಶ್ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು