ಜನಪದ ಎಂದರೆ ಹಿರಿಯಜ್ಜನ ನೆನಪು ಶಿವಲಿಂಗಯ್ಯ
ಜನಪದ ಎಂದರೆ ನಮ್ಮ ಹಿರಿಯಜ್ಹ, ಮುತ್ತಜ್ಜರು ನೆನಪಿಗೆ ಬರುತ್ತಾರೆ, ನಮ್ಮ ಬಾಲ್ಯ ನೆನಪಿಗೆ ಬರುತ್ತದೆ, ಪುರಾಣ ಮತ್ತು ಇತಿಹಾಸದ ಕಥೆಗಳನ್ನು ಸಹ ಜಾನಪದ ಶೈಲಿಯಲ್ಲಿ ಹೇಳುತ್ತಿದ್ದ ನಮ್ಮ ಅಜ್ಜ ಅಜ್ಜಿಯರ ನೆನಪು ಒಮ್ಮೆಲೆ ಮೂಡುತ್ತಿದೆ ಎಂದು ಮುಖ್ಯಮಂತ್ರಿ ಗಳ ವಿಶೇಷ ಕರ್ತವ್ಯ ಅಧಿಕಾರಿ ಶಿವಲಿಂಗಯ್ಯನವರು ನೆನಪಿಸಿಕೊಂಡರು.
ಅವರು ಕರ್ನಾಟಕ ಜಾನಪದ ಪರಿಷತ್ತು ಜಾನಪದ ಲೋಕದಲ್ಲಿ ಹಮ್ಮಿಕೊಂಡಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಲಾವಿದರು ಹೆಂಡ ಕುಡಿಯುವುದು, ಜೂಜಾಡುವುದು, ಪರ ಹೆಣ್ಣಿನ ಸಹವಾಸ ಮಾಡುವುದು, ಧೂಮಪಾನ ಮಾಡುವುದು ಮತ್ತು ಸುಳ್ಳು ಹೇಳುವಂತಹ ಕೆಲವು ದುಶ್ಚಟಗಳನ್ನು ಬಿಡಬೇಕು, ಆಗಲೇ ಆತ ಪರಿಪೂರ್ಣ ಮತ್ತು ಶ್ರೇಷ್ಠ ಕಲಾವಿದನಾಗಲು ಸಾಧ್ಯವಾಗುತ್ತದೆ, ಇಂದಿನ ಸಮಾಜದಲ್ಲಿ ಸಂಬಂಧಗಳು ಸಹ ವ್ಯವಹಾರವಾಗಿವೆ, ಸಮಾಜದ ಋಣ ತೀರಿಸಲು ಹಲವು ಜನ್ಮಗಳು ಸಾಲದು, ಅದರಲ್ಲೂ ಸ್ವಾರ್ಥಕ್ಕಾಗಿ ಸಮಾಜ ಸೇವೆ ಮಾಡಬಾರದು ಎಂದರು.
ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜು ಮಾತನಾಡಿ ತಿಂಗಳ ಅತಿಥಿ ಕಾರ್ಯಕ್ರಮವನ್ನು ಒಟ್ಟುಗೂಡಿಸಿ ಪುಸ್ತಕ ಹೊರ ತರುತ್ತಿರುವುದಾಗಿ ತಿಳಿಸಿದರು.
ಜಾನಪದ ಪರಿಷತ್ತಿನ ಅಧ್ಯಕ್ಷರಾದ ಟಿ ತಿಮ್ಮೇಗೌಡರು ಮಾತನಾಡಿ ಜಾನಪದ ವನ್ನೇ ಉಸಿರಾಗಿಸಿಕೊಂಡಿರುವ ಕಲಾವಿದರಿಗೆ ಸರ್ಕಾರವು ಸೌಲಭ್ಯಗಳನ್ನು ಒದಗಿಸಿದರೆ ಜಾನಪದ ಮುಂದಿನ ಪೀಳಿಗೆಗೂ ಉಳಿಯಲು ಸಾಧ್ಯವಾಗುತ್ತದೆ, ಕನ್ನಡ ಸಂಸ್ಕೃತಿ ಇಲಾಖೆ, ಕ್ರೀಡಾ ಯುವಜನ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯು ನಮ್ಮ ಜೊತೆ ಕೈ ಜೋಡಿಸುತ್ತಿರುವುದು ಸಂತಸ ತಂದಿದೆ ಎಂದರು.
ಈ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯ ಡೊಳ್ಳಿನ ಹಾಡು-ಕುಣಿತ ಕಲಾವಿದರಾದ ಸೋಮಣ್ಣ ದುಂಡಪ್ಪ ದನಗೊಂಡ ಮತ್ತು ತಂಡದವರು ರವರು ಡೊಳ್ಳು ಹುಟ್ಟಿದ ಬಗ್ಗೆ, ಭೀಮಾನದಿ ತೀರದ ಬಗ್ಗೆ ಡಾ ಹೆಚ್ ಎಲ್ ನಾಗೇಗೌಡರು ಮತ್ತು ಅವರ ಕಾದಂಬರಿಗಳ ಬಗ್ಗೆ ಹಾಡುಗಳನ್ನು ಕಟ್ಟಿ ಹಾಡಿ ನೆರೆದಿದ್ದ ಕಲಾ ಪ್ರೇಮಿಗಳ ಮನಸೂರೆಗೊಂಡರು.
ಕಾರ್ಯಕ್ರಮದಲ್ಲಿ ಬೆಸ್ಕಾಂ ಅಧಿಕಾರಿ ದೊಡ್ಡರಾಮಯ್ಯ, ರಾಮನಗರ ಜಿಲ್ಲೆಯ ಅಧ್ಯಕ್ಷ ಸು ತ ರಾಮೇಗೌಡ, ಸಂಗೀತ ವಿದ್ವಾನ್ ಶಿವಾಜಿರಾವ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು