ಕನ್ನಡ ರಾಜ್ಯೋತ್ಸವವನ್ನು ರಾಜ್ಯದಲ್ಲಷ್ಟೇ ಅಲ್ಲದೆ, ಕನ್ನಡಿಗರು ಹೆಚ್ಚಿರುವ ಹೊರ ರಾಜ್ಯಗಳಲ್ಲಿ ಮತ್ತು ಹೊರ ದೇಶಗಳಲ್ಲಿ ಇಂದು ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ದುಬೈ ನಂತಹ ಅರಬ್ ದೇಶದಲ್ಲಿ ಇಂದು ೩೧೦ ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ. ಎರಡು ಸಾವಿರ ವರ್ಷಗಳ ಇತಿಹಾಸವಿದೆ, ಎಂಟು ಜ್ಞಾನ ಪೀಠ ಪ್ರಶಸ್ತಿ ಲಭಿಸಿವೆ ಎಂದು ತಹಶಿಲ್ದಾರ ನಾಗೇಶ್ ತಿಳಿಸಿದರು. ಅವರು ತಾಲ್ಲೂಕು ಕಛೇರಿಯ ಸಂಕೀರ್ಣದಲ್ಲಿ ರಾಷ್ಟ್ರಧ್ವಜ ಹಾರಿಸಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳು ಮೂಲತಃ ಹೊರರಾಜ್ಯದವರಾದರೂ ಸಹ ಕನ್ನಡಾಭಿಮಾನಿ. ಕನ್ನಡ ರಾಜ್ಯೋತ್ಸವ ದ ಸಭೆಗಳಲ್ಲಿ ಕನ್ನಡದ ಬಗ್ಗೆ ಅವರ ಕನ್ನಡದ ಮಾತುಗಳನ್ನಾಲಿಸಿದಾಗ ನಮಗೆ ನಾವಾಡುವ ಆಂಗ್ಲ ಮಿಶ್ರಿತ ಕನ್ನಡದ ಮಾತುಗಳ ಬಗ್ಗೆ ಮುಜುಗರವಾಗುತ್ತದೆ. ಕನ್ನಡ ನಾಡಿನಲ್ಲೇ ಹುಟ್ಟಿ, ಬೆಳೆದು ಕನ್ನಡದಲ್ಲೇ ಓದಿದ ನಾವು ಕನ್ನಡವನ್ನು ಉಳಿಸಿಬೆಳೆಸಿ ವಿಶ್ವದಾದ್ಯಂತ ಪಸರಿಸಬೇಕಿದೆ ಎಂದು ದಂಡಾಧಿಕಾರಿ ನಾಗೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಛೇರಿಯ ಸಿಬ್ಬಂದಿಗಳು, ರಾಷ್ಟ್ರೀಯ ಹಬ್ಬಗಳ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ನಗರಸಭೆಯಲ್ಲೂ ಸರಳಾಚರಣೆ
ನಗರಸಭೆಯ ಆವರಣದಲ್ಲಿರುವ ಪುರಭವನದ ಎದುರು ಪೌರಾಯುಕ್ತ ಶಿವನಂಕಾರಿಗೌಡರು ರಾಷ್ಟ್ರಧ್ವಜ ಹಾರಿಸಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಸರಳವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು.
ವಿನೂತನವಾಗಿ ರಾಜ್ಯೋತ್ಸವ ಆಚರಿಸಿದ ಕಕಜವೇ
ಕನ್ನಡ ದಿನ ಪತ್ರಿಕೆಗಳನ್ನು ಹಾಗೂ ಕಬ್ಬಿನ ಹಾಲನ್ನು ಉಚಿತವಾಗಿ ನೀಡುವ ಮೂಲಕ ವಿನೂತನವಾಗಿ ಕನ್ನಡ ರಾಜ್ಯೋತ್ಸವವನ್ನು ಕಕಜವೇ ರಾಜ್ಯಾಧಕ್ಷ ರಮೇಶ್ ಗೌಡರ ನೇತೃತ್ವದಲ್ಲಿ ನಗರದ ಕಾವೇರಿ ವೃತ್ತದಲ್ಲಿ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಗೌಡರು ಕನ್ನಡ ನಾಡು, ನುಡಿ, ಜಲ ಸಮಸ್ಯೆಗಳು ಎದುರಾದಾಗ ಎಲ್ಲರೂ ಒಗ್ಗೂಡಿ ಪ್ರತಿಭಟಿಸಬೇಕು. ಕನ್ನಡ ದಿನಪತ್ರಿಕೆಗಳನ್ನು ಕೊಂಡು ಓದುವ ಗುಣ ಬೆಳೆಸಿಕೊಳ್ಳಬೇಕು. ನಾವು ಕನ್ನಡಿಗರು ಎಂದು ಎದೆ ತಟ್ಟಿ ಹೇಳಲು ಅನುವು ಮಾಡಿಕೊಟ್ಟ ಮಹನೀಯರನ್ನು ಸದಾಕಾಲವೂ ಸ್ಮರಿಸಬೇಕು ಎಂದರು.
ರಾಜ್ಯೋತ್ಸವ ಆಚರಣಾ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸಿಂಲಿಂ ನಾಗರಾಜು, ಡಾ ರಾಜ್ ಕಲಾಬಳಗದ ಅಧ್ಯಕ್ಷ ಮಂಜುನಾಥ್, ಜಯಕರ್ನಾಟಕ ಸಂಘದ ರೇವಣ್ಣ, ಬೇವೂರು ಯೋಗೇಶ್ ಗೌಡ, ನಾಗವಾರ ಶಂಭೂಗೌಡರು ಮಾತನಾಡಿದರು.
ಕಸಾಪದಿಂದ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಹೃದಯ ಭಾಗದಲ್ಲಿರುವ ಗಾಂಧಿ ಭವನದ ಎದುರಿನ ಕುವೆಂಪುರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸರಳವಾಗಿ ರಾಜ್ಯೋತ್ಸವವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸಿಂಲಿಂ ನಾಗರಾಜು ರವರು, ಅನೇಕ ಮಹನೀಯರು ಕಷ್ಟಪಟ್ಟು ನೂರೈವತ್ತು ವರ್ಷಗಳಿಂದ ಸ್ವಾತಂತ್ರ್ಯ ಸಂಗ್ರಾಮದ ಜೊತೆಗೆ, ಕನ್ನಡ ಏಕೀಕರಣಕ್ಕೆ ಟೊಂಕಕ ಕಟ್ಟಿ ನಿಂತ ಕನ್ನಡಿಗರಿಂದ ನಾವು ಕನ್ನಡದವರಾಗಿ ಉಳಿಯಲು ಸಾಧ್ಯವಾಗಿದೆ. ಕನ್ನಡ ಏಕೀಕರಣಕ್ಕೆ ಕೆಂಗಲ್ ಹನುಮಂತಯ್ಯನವರ ಕೊಡುಗೆ ಅಪಾರ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿಂಲಿಂ ನಾಗರಾಜು ತಿಳಿಸಿದರು.
ಕನ್ನಡ ಮಿತ್ರ ಸಂಘದ ಅಧ್ಯಕ್ಷ ಎಂ ಸಿ ಮಲ್ಲಯ್ಯ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕನ್ನಡ ಅಧೋಗತಿಗಿಳಿಯುತ್ತಿದೆ. ಕನ್ನಡವನ್ನು ಉಳಿಸಿಬೆಳೆಸಲು ಕನ್ನಡಿಗರಿಂದ ಮಾತ್ರ ಸಾಧ್ಯ, ನಾವೆಲ್ಲರೂ ಕನ್ನಡವನ್ನೇ ಬರೆಯುವ ಮತ್ತು ಮಾತನಾಡುವ ಮೂಲಕ ಪರಭಾಷಿಕರನ್ನೂ ಸಹ ಕನ್ನಡದಲ್ಲೇ ಮಾತನಾಡುವಂತೆ ಮಾಡಿ ಕನ್ನಡವನ್ನು ಉಳಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಸು ತ ರಾಮೇಗೌಡ, ಕಸಾಪ ತಾಲ್ಲೂಕು ಅಧ್ಯಕ್ಷ ಮತ್ತೀಕೆರೆ ಚಲುವರಾಜು, ಕೋಶಾಧ್ಯಕ್ಷ ಶ್ರೀನಿವಾಸ ರಾಂಪುರ, ಶಿಕ್ಷಕ ಎಲೆಕೇರಿ ರಾಜಶೇಖರ್, ಬಿ ಎನ್ ಕಾಡಯ್ಯ, ಎಲೇಕೇರಿ ಶಿವರಾಂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಐದೂವರೆ ಕೋಟಿ ಕನ್ನಡಿಗರ ಮಾತೃಭಾಷೆ ಕನ್ನಡ, ಎಲೇಕೇರಿ ರಾಜಶೇಖರ
ಕನ್ನಡ ಪುರಾತನ ಭಾಷೆ, ಕರ್ನಾಟಕದಲ್ಲಿ ಐದೂವರೆ ಕೋಟಿ ಜನರ ಮಾತೃಭಾಷೆಯಾಗಿದೆ. ಇದನ್ನು ಉಳಿಸಿಬೆಳೆಸುವ ಕೆಲಸ ನಮ್ಮೆಲ್ಲರ ಮೇಲಿದೆ ಎಂದು ಶಿಕ್ಷಕ ಎಲೆಕೇರಿ ರಾಜಶೇಖರ್ ತಿಳಿಸಿದರು. ಅವರು ಎಲೆಕೇರಿ ಗ್ರಾಮದ ಸಾಧನಾ ಸಂಭ್ರಮ ಪೂರ್ವ ಪ್ರಾಥಮಿಕ ಶಾಲೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ರಾಮಪ್ರಸಾದ್ ಮತ್ತು ಪತ್ರಕರ್ತ ಗೋ ರಾ ಶ್ರೀನಿವಾಸ ಮಾತನಾಡಿದರು. ಕಾರ್ಯಕ್ರಮದಲ್ಲಿ ನರಸಿಂಹಮೂರ್ತಿ, ರವಿಕುಮಾರ್, ಮಲ್ಲೇಶ್, ಕವಿತಾ, ಶಶಿಕಲಾ, ಶಾಂಭವಿ ಸುಕೀರ್ತಿ ಮತ್ತಿತರರು ಉಪಸ್ಥಿತಿರಿದ್ದರು.
ಜಾನಪದ ಕಲಾವಿದೆಯ ಮನೆಯಲ್ಲಿ ರಾಜ್ಯೋತ್ಸವ
ಕನ್ನಡದ ಜಾನಪದ ಕಲಾವಿದೆ ಲಕ್ಷ್ಮಿ ಶ್ರೀನಿವಾಸ ರವರ ಮನೆಮನದಲ್ಲೂ ಕನ್ನಡಮ್ಮನ ಜಾತ್ರೆಯೇ ನಡೆಯಿತು. ಮನೆಯ ದಿಕ್ಕುಗಳಲ್ಲೂ ಕನ್ನಡಮ್ಮನ ಧ್ವಜವನ್ನು ನೆಟ್ಟು ಪೂಜಿಸುವ ಮೂಲಕ ತಮ್ಮ ಕನ್ನಡಾಭಿಮಾನವನ್ನು ಮೆರೆದರು. ಕನ್ನಡಮ್ಮನ ಪೂಜೆಗೆ ಅವರ ಪುಟ್ಟ ಮಗಳು ಪೂರ್ಣಶ್ರೀಗೌಡ ಸಾಥ್ ನೀಡಿದ್ದು ವಿಶೇಷವಾಗಿತ್ತು.
ಡಿ ಟಿ ರಾಮು ವೃತ್ತದಲ್ಲಿ ಕದಂಬ ಸೇನೆಯಿಂದ ರಾಜ್ಯೋತ್ಸವ
ಡಿ ಟಿ ರಾಮು ವೃತ್ತದಲ್ಲಿ ಕದಂಬ ಸೇನೆ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಡಿ ಟಿ ರಾಮು ವೃತ್ತದ ಸುತ್ತಲೂ ಇರುವ ಹಲವಾರು ಕಂಬಗಳಿಗೆ ತಳಿರುತೋರಣ ಮತ್ತು ಕನ್ನಡದ ಧ್ವಜಗಳನ್ನು ಕಟ್ಟುವ ಮೂಲಕ ವಿಜೃಂಭಣೆಯ ರಾಜ್ಯೋತ್ಸವ ಆಚರಿಸಿದರು.
ನಗರದ ವರ್ತಕರ ಸಂಘದಿಂದಲೂ ಸಹ ಪೇಟೆ ಬೀದಿಯ ನಿಂಬೆಹಣ್ಣು ವೃತ್ತದಲ್ಲಿ ಸರಳ ರಾಜ್ಯೋತ್ಸವ ಆಚರಿಸಿದರು.
ಹಲವಾರು ಕನ್ನಡಿಗರು ತಮ್ಮ ಮನೆಯಲ್ಲಿ, ಕಛೇರಿಯಲ್ಲಿ ಹಾಗೂ ತಮ್ಮ ವಾಹನಗಳಿಗೆ ಕನ್ನಡ ಧ್ವಜದಿಂದ ಅಲಂಕರಿಸಿ ತಮ್ಮದೇ ರೀತಿಯಲ್ಲಿ ಸರಳವಾಗಿ ರಾಜ್ಯೋತ್ಸವ ಆಚರಿಸುವ ಮೂಲಕ ಕನ್ನಡಾಭಿಮಾನವನ್ನು ಮೆರೆದರು.
ಚನ್ನಪಟ್ಟಣ ತಾಲೂಕಿನಾದ್ಯಂತ ಕೆಲವು ಇಲಾಖೆಗಳು ಹಾಗೂ ವಿವಿಧ ಸಂಘಸಂಸ್ಥೆಗಳು ವಿವಿಧ ರೀತಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಿದರು.
೬೫ ನೇ ಕನ್ನಡ ರಾಜ್ಯೋತ್ಸವ ದ ಪ್ರಯುಕ್ತ ಇಂದು ನಗರದ ಕೆಲವು ಅಂಗಡಿಗಳಲ್ಲಿ ವಿವಿಧ ಆಕಾರದ ಕನ್ನಡ ಧ್ವಜಗಳು, ಕನ್ನಡದ ರುಮಾಲುಗಳನ್ನು ಮಾರಾಟಕ್ಕಿಡಲಾಗಿತ್ತು. ಸ್ಕೂಟರ್, ಬೈಕ್, ಆಟೋ, ಕಾರು ಮತ್ತು ಲಾರಿಗಳ ಮಾಲೀಕರು ಮತ್ತು ಚಾಲಕರು ಧ್ವಜ ಮತ್ತು ರುಮಾಲುಗಳನ್ನು ಕೊಂಡು ತಮ್ಮ ವಾಹನಗಳಿಗೆ ಕಟ್ಟುವ ಮೂಲಕ ತಮ್ಮ ಅಭಿಮಾನವನ್ನು ಮೆರೆದರೆ ಅಪ್ಪಟ ಕನ್ನಡಾಭಿಮಾನಿಯಾದ ವನಿತಾ ಸ್ಯಾರಿ ಸೆಲೆಕ್ಷನ್ ಮಾಲೀಕ ವಿಜಯಕುಮಾರ್ ಗುಲೇಚಾ ರವರು ತಮ್ಮ ಸೀರೆ ಅಂಗಡಿಯ ಗೊಂಬೆಗಳಿಗೆ ಕನ್ನಡಮ್ಮ ಭುವನೇಶ್ವರಿ ತಾಯಿಗೆ ಶೃಂಗರಿಸಿದಂತೆ ಅರಿಶಿನ ಕುಂಕುಮ ಮಿಶ್ರಿತ ಬಣ್ಣದ ಸೀರೆಗಳನ್ನು ಉಡಿಸಿ ಕನ್ನಡಿಗರ ಮನಸೆಳೆದರು.
ಪ್ರತಿಕ್ರಿಯೆಗಳು