ಚನ್ನಪಟ್ಟಣ:ಫೆ/26/21/ಶುಕ್ರವಾರ.
ರಾಷ್ಟ್ರೀಯ ಹೆದ್ದಾರಿ 275 ರ ಬೈಪಾಸ್ ರಸ್ತೆ ಕಾಮಗಾರಿಗಾಗಿ ಸಾಕಷ್ಟು ಕೆರೆಕಟ್ಟೆಗಳನ್ನು ಒತ್ತುವರಿ ಮಾಡಲಾಗಿದೆ ಎಂಬ ದೂರುಬಂದ ಹಿನ್ನೆಲೆಯಲ್ಲಿ ಸಮಿತಿಯ ಸದಸ್ಯರು ಭೇಟಿ ನೀಡಿದ್ದೇವೆ. ಈ ವೇಳೆ ತಿಟ್ಟಮಾರನಹಳ್ಳಿ ಗ್ರಾಮದ ರಾಮಮ್ಮ ನ ಕೆರೆ ಸೇರಿದಂತೆ ಸಾಕಷ್ಟು ಕೆರೆಗಳು ಒತ್ತುವರಿಯಾಗಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ವಿಧಾನಸಭೆ ಭರವಸೆಗಳ ಸಮಿತಿ ಅಧ್ಯಕ್ಷ ಕೆ.ರಘುಪತಿಭಟ್ ತಿಳಿಸಿದರು.
ನೂತನವಾಗಿ ನಿರ್ಮಾಣವಾಗುತ್ತಿರುವ ಎನ್ಎಚ್ 275 ರಸ್ತೆ ಕಾಮಗಾರಿಗಾಗಿ ಸರ್ಕಾರಿ ಕೆರೆಕಟ್ಟೆಗಳನ್ನು ಒತ್ತುವರಿ ಮಾಡಲಾಗುತ್ತಿದೆ ಎಂಬ ದೂರುಬಂದ ಹಿನ್ನೆಲೆಯಲ್ಲಿ ಸಮಿತಿಯಅಧ್ಯಕ್ಷ ಕೆ.ರಘುಪತಿಭಟ್ ನೇತೃತ್ವದಲ್ಲಿ ಭೇಟಿ ನೀಡಿದ ಸದಸ್ಯರು ಮತ್ತು ಅಧಿಕಾರಿಗಳ ತಂಡ ಗ್ರಾಮದ ಕೆರೆಯ ಬಳಿ ಹಾದುಹೋಗುತ್ತಿರುವ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ಅಧ್ಯಕ್ಷ, ಈ ರಸ್ತೆ ಕಾಮಗಾರಿಯ ಗುತ್ತಿಗೆ ಪಡೆದಿರುವ ಸಂಸ್ಥೆ ನಿಯಮಗಳನ್ನು ಗಾಳಿಗೆ ತೂರಿರುವುದು ಸ್ವಷ್ಟವಾಗಿದೆ.
ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿರುವ ಕಂಪನಿಯವರು ಕೆರೆ ಅಭಿವೃದ್ಧಿ ಪ್ರಾಧಿಕಾರದ ಅನುಮತಿಯನ್ನು ಪಡೆದಿದ್ದೇವೆ ಎಂದು ಸಂಬಂಧಪಟ್ಟವರು ತೋರಿಸುತ್ತಿದ್ದಾರೆ.ಆದರೆ ಆ ಪ್ರಾಧಿಕಾರ ನೀಡಿರುವ ನಿಯಮಗಳನ್ನೇ ಪಾಲಿಸಿಲ್ಲ.ಯಾವುದೇ ನಿಯಮಗಳನ್ನು ಪಾಲಿಸದೇ ತಮ್ಮಿಷ್ಟ ಬಂದಂತೆ ಸರ್ಕಾರಿ ಕೆರೆಕಟ್ಟೆಗಳನ್ನು ಒತ್ತುವರಿ ಮಾಡಿಕೊಳ್ಳುವ ಮೂಲಕ ಸಂಸ್ಥೆ ಕಾನೂನನ್ನು ಉಲ್ಲಂಘಿಸಿದೆ ಎಂದು ದೂರಿದರು.
ಒತ್ತುವರಿ ಆಗಿರುವ ಜಾಗದ ಬದಲಿ ಬೇರೆ ಜಾಗವನ್ನು ಸ್ವಾಧೀನ ಮಾಡಿ ಸಂಬಂಧಪಟ್ಟ ಇಲಾಖೆಗೆ ನೀಡಲು ಗಡುವು ನೀಡಲಾಗಿದೆ.ಅರಣ್ಯಕ್ಕೆ ಎಷ್ಟು ಮಹತ್ವವಾಗಿದೆಯೋ, ಅಷ್ಟೇ ಮಹತ್ವ ಕೆರೆ ಕಟ್ಟೆಗಳಿಗಿದೆ.ಆದರೆ, ಈ ಯೋಜನೆಯಲ್ಲಿ ಕೆರೆಗಳ ಬಗ್ಗೆ ನಿರ್ಲಕ್ಷ್ ವಹಿಸಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಸಮಿತಿ ಗಂಭೀರವಾಗಿ ಪರಿಗಣಿಸಿದೆ.ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ ಹಾಗೂ ಬೇಜವಾಬ್ದಾರಿಯೂ ಎದ್ದು ಕಾಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಮುಂದಿನ ಸಮಿತಿಯ ಸಭೆಯಲ್ಲಿ ಚರ್ಚೆ ನಡೆಸಿ, ನಂತರ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದರು.
*ಕೋಡಿ ಮುಚ್ಚಿರುವುದು ಯಾತಕ್ಕೆ?*
ಈ ಕೆರೆಯ ಕೋಡಿಯನ್ನು ಮುಚ್ಚಿ ಮೇಲ್ಸೆತುವೆಕಾಮಗಾರಿ ನಡೆಸಲಾಗುತ್ತಿದೆ. ಕೆರೆಯ ಕೋಡಿ ಮುಚ್ಚಿರುವ ಕಾರಣ ಕೆರೆ ತುಂಬಿದರೆ ಹೆಚ್ಚುವರಿ ನೀರು ಎಲ್ಲಿ ಹರಿದು ಹೋಗಬೇಕು ಎಂದು ಪ್ರಶ್ನಿಸಿದ ಸಮಿತಿಯ ಸದಸ್ಯರು, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ಎಂಬುವವರನ್ನು ಕ್ಲಾಸ್ ತೆಗೆದುಕೊಂಡರು.ವಿಶಾಲವಾಗಿರುವ ಈ ಕೆರೆಯ ನೀರು ಹರಿದು ಹೋಗಲು ಇರುವ ಕೋಡಿಯನ್ನು ಮುಚ್ಚಿರುವ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯಲಾಗಿದೆಯೇ ಎಂದು ಪ್ರಶ್ನಿಸಿದರು.
ಈ ಬಗ್ಗೆ ಸ್ಥಳದಲ್ಲಿದ್ದ ಸಣ್ಣನೀರಾವರಿ ಇಲಾಖೆ ಅಧಿಕಾರಿಗಳು ಕಾಮಗಾರಿಗಾಗಿ ಬಳಸಿಕೊಳ್ಳುವುದಕ್ಕೆ ಅನುಮತಿ ನೀಡಲಾಗಿದೆಯಷ್ಟೇ, ಆದರೆ, ನಿಯಮಗಳನ್ನು ಗಾಳಿಗೆ ತೂರಿ ಗುತ್ತಿಗೆ ನಿರ್ವಹಿಸುತ್ತಿರುವ ಸಂಸ್ಥೆ ಬೇಕಾಬಿಟ್ಟಿಯಾಗಿ ವರ್ತಿಸುತ್ತಿದೆ ಎಂದು ದೂರಿದರು. ಇದರಿಂದ ಇನ್ನಷ್ಟು ಅಸಮಾಧಾನಗೊಂಡ ಸಮಿತಿಯ ಅಧ್ಯಕ್ಷ ಮತ್ತು ಸದಸ್ಯರು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ತೀವ್ರ ಬೇಸರ ವ್ಯಕ್ತಪಡಿಸಿದರು.ಈ ವೇಳೆ ಸ್ಥಳದಲ್ಲಿದ್ದ ತಿಟ್ಟಮಾರನಹಳ್ಳಿ ಸ್ಥಳೀಯರು ರಸ್ತೆಕಾಮಗಾರಿ ನಡೆಸುತ್ತಿರುವ ಗುತ್ತಿಗೆ ಸಂಸ್ಥೆ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ದೂರಿನ ಸುರಿಮಳೆ ಸುರಿಸಿದರು.
*ರವೀಂದ್ರ ಶ್ರೀಕಂಠಯ್ಯ ಗರಂ:*
ಹೆದ್ದಾರಿ ಪ್ರಾಧಿಕಾರದ ಅಧಿಕಾರಗಳ ಮೇಲೆ ಸಾರ್ವಜನಿಕರು ದೂರಿನ ಸುರಿಮಳೆ ಸುರಿಸಿದ ಹಿನ್ನೆಲೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ಮೇಲೆ ಸಮಿತಿಯ ಸದಸ್ಯ, ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಗರಂ ಆದರು. ಜನರ ತೆರಿಗೆ ಹಣದಿಂದ ಸರ್ಕಾರ ನಿಮಗೆ ವೇತನ ನೀಡುತ್ತದೆ. ನೀವು ಜನತೆ ಹಾಗೂ ಸರ್ಕಾರಕ್ಕೆ ನಿಷ್ಠರಾಗಿರಬೇಕು. ಅದನ್ನ ಬಿಟ್ಟು ಯಾವುದೇ ಗುತ್ತಿಗೆ ಸಂಸ್ಥೆಗೆ ಸಹಕಾರ ನೀಡಬಾರದು. ಇಲ್ಲಿನ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟರೆ ಜನತೆ ನಿಮ್ಮನ್ನು ನೆನಪಿಸಿಕೊಳ್ಳುತಾರೆ. ಅದನ್ನು ಬಿಟ್ಟು ಕೆಲಸವಾದ ಮೇಲೆ ಜಾಗ ಖಾಲಿಮಾಡುವ ಗುತ್ತಿಗೆ ಸಂಸ್ಥೆಗಳಿಗೆ ಯಾಕ್ರೀ ಅನುಕೂಅನುಕೂಲಮಾಡಿಕೊಡುತ್ತೀರಾ !? ಎಲ್ಲ ಅವಾಂತರಕ್ಕೂ ನಿಮ್ಮ ಸಹಕಾರವಿರುವುದು ಸ್ಪಷ್ಟವಾಗಿದೆ. ಕೂಡಲೇ ತಮ್ಮ ನಿಷ್ಠೆ ಬದಲಿಸಿಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡಿಎಂದು ತಾಕೀತು ಮಾಡಿದರು.
*ಒತ್ತುವರಿ ಮಾಡಿಕೊಂಡಿರುವಷ್ಟು ಜಮೀನನ್ನು ಖರೀದಿಸಿ ಕೊಡಿ*
ಕೂಡಲೇ ಕೆರೆಯ ನೀರು ಹರಿದು ಹೋಗಲು ಕ್ರಮ ವಹಿಸಬೇಕು. ಕೂಡಲೇ ಒತ್ತುವರಿಯಾಗಿರುವ ಜಾಗದಷ್ಟೇ ಜಮೀನನ್ನು ಸಂಬಂಧಪಟ್ಟವರು ಸ್ವಾಧೀನಪಡಿಸಿ, ಕೆರೆಯಜಾಗಕ್ಕೆ ನೀಡಬೇಕು. ಇನ್ನೆರಡು ವಾರಗಳಲ್ಲಿ ಈ ಎಲ್ಲಾ ತಪ್ಪುಗಳನ್ನು ಸರಿಪಡಿಸಬೇಕು.ಇಲ್ಲವಾದರೆ, ಮುಂದಿನ ಕ್ರಮಗಳನ್ನು ಜರುಗಿಸಲು ಶಿಪಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದರು.
ಸ್ಥಳೀಯ ಶಾಸಕರ ಗಮನಕ್ಕೆ ತರದೇ ನೀವು ಮಾಡಿರುವ ಅವಾಂತರಗಳಿಂದ ಜನ ಪ್ರತಿನಿಧಿಗಳಿಗೆ ಕೆಟ್ಟ ಹೆಸರು ಬರುತ್ತಿದೆ. ಈ ಬಗ್ಗೆ ಕ್ಷೇತ್ರದ ಶಾಸಕರಾದ ಕುಮಾರಣ್ಣನವರ ಜೊತೆ ಚರ್ಚಿಸುತ್ತೇನೆ ಎಂದರು.
ಕಂಪನಿಯವರು ಕಲ್ಲಿನಲ್ಲಿ ಹೊಡೆಯುತ್ತಾರೆ::
ಕಾಮಗಾರಿಗಾಗಿ ಕೆರೆಗಳನ್ನು ಮುಚ್ಚುವ ಹಾಗೂ ಬಳಸಿಕೊಳ್ಳುವುದಕ್ಕೆ ನಿಯಮಗಳನ್ನು ಗಾಳಿಗೆ ತೂರಲಾಗಿದೆ.ಈ ಬಗ್ಗೆ ಸಾಕಷ್ಟು ಬಾರಿ ಇಲಾಖೆಯ ವತಿಯಿಂದ ತಿಳಿಹೇಳಲಾಗಿದೆ. ಆದರೆ, ನಮ್ಮ ಅಧಿಕಾರಿಗಳನ್ನು ಗುತ್ತಿಗೆ ನಿರ್ವಹಣೆಯ ಹೊಣೆ ಹೊತ್ತಿರುವ ಸಂಸ್ಥೆಯ ಸಿಬ್ಬಂದಿಗಳು ಬೆದರಿಸಿ ಕಳುಹಿಸುವ ಮೂಲಕ ದೌರ್ಜನ್ಯ ನಡೆಸಿರುವ ಸಾಕ್ಷಿಯಿದೆ ಎಂದು ಸ್ಥಳದಲ್ಲಿದ್ದ ಸಣ್ಣ ನೀರಾವರಿ ಇಲಾಖೆಯ ರಾಜ್ಯ ಕಾರ್ಯದರ್ಶಿ ಸಿ.ಮೃತ್ಯುಂಜಯಸ್ವಾಮಿ ಸದನ ಸಮಿತಿಯ ಸದಸ್ಯರ ಗಮನಕ್ಕೆ ತಂದರು.
ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಈ ಗುತ್ತಿಗೆ ನಿರ್ಮಾಣದ ಕಂಪನಿಯ ಅಕ್ರಮಗಳನ್ನು ಪ್ರಶ್ನಿಸಿದರೆ, ಕಲ್ಲಿನಿಂದ ಹೊಡೆಯಲು ಬರುತ್ತಾರೆ.ಈ ಬಗ್ಗೆ ದೂರುಕೂಡ ಸಲ್ಲಿಸಿದ್ದೇವೆ ಎಂದು ಸಮಿತಿಯ ಸದಸ್ಯರಿಗೆ ತಿಳಿಸಿದರು.
ಹಿರಿಯ ಮಟ್ಟದ ಅಧಿಕಾರಿಗಳು ಗುತ್ತಿಗೆ ಕಂಪನಿಯ ಜೊತೆ ಶಾಮೀಲಾಗಿರುವ ಶಂಕೆಯಿದೆ ಈ ಬಗ್ಗೆ ಮುಂದಿನ ಸಭೆಯಲ್ಲಿಚರ್ಚಿಸುತ್ತೇವೆ ಎಂದು ಸಮಿತಿಯ ಸದಸ್ಯರು ತಿಳಿಸಿದರು.
ಈ ವೇಳೆ ಸಮಿತಿಯ ಸದಸ್ಯರಾದ ರವೀಂದ್ರ ಶ್ರೀಕಂಠಯ್ಯ, ರಾಮಪ್ಪ, ಹರೀಶ್ ಪೂಂಜಾ, ಸಂಜೀವ ಮಠಂದೂರು, ವೆಂಕಟರೆಡ್ಡಿ ಮುದ್ನಾಳ್, ಜಿಲ್ಲಾಧಿಕಾರಿ ಎಂ.ಎಸ್ಅರ್ಚನಾ, ಜಿಪಂ ಸಿಇಒ ಇಕ್ರಂ, ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ಶ್ರೀಧರ್, ತಿಟ್ಟಮಾರನಹಳ್ಳಿ ಗ್ರಾಪಂ ಪಿಡಿಒ ಕಾವ್ಯ, ತಿಟ್ಟಮಾರನಹಳ್ಳಿ ಮುಖಂಡರಾದ ಟಿ.ಪಿ.ರಘುನಂದನ್, ಅನಿಲ್ಕುಮಾರ್, ಮಹದೇವ್, ರಾಜಣ್ಣ, ಸಿದ್ದೇಗೌಡ, ಗ್ರಾಪಂ ಸದಸ್ಯ ಮುನಿವೆಂಕಟಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಸ್ತೆಕಾಮಗಾರಿಗೆ ಕೆರೆಯಕೋಡಿ ಮುಚ್ಚಿರುವ ಕಾರಣ ನೀರು ನಮ್ಮ ಗದ್ದೆಗಳಿಗೆ ನುಗ್ಗುತ್ತಿದೆ ಎಂದು ತಿಟ್ಟಮಾರನಹಳ್ಳಿ ಗ್ರಾಮದ ರೈತ ಶಿವರಾಜು ಎಂಬುವವರು ಸಮಿತಿಯ ಮುಂದೆ ತಮ್ಮ ಅಳಲು ತೋಡಿಕೊಂಡರು. ಸರ್.., ಈ ಹಾಳಾದ ರಸ್ತೆಯಿಂದ ನಮ್ಮ ಗದ್ದೆಗಳು ಹಾಳಾಗುತ್ತಿವೆ. ಇವರನ್ನು ಹೇಳೋರು ಕೇಳೋರು ಯಾರು ಇಲ್ಲದಂಗೆ ಆಗಿದೆ. ನಾವು ಕೇಳಲು ಹೋದ್ರೆ, ಟಸ್ ಪುಸ್ ಅಂಥ ಹಿಂದಿಯಲ್ಲಿ ಮಾತನ್ನಾಡುತ್ತಾರೆ. ಈ ರಸ್ತೆಯಿಂದ ನಮಗೆ ಬೇಜಾನ್ ತೊಂದ್ರೆ ಆಗ್ತಾ ಇದೆ.., ನೀವಾದರೂ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಡಿ ಎಂದು ಮನವಿ ಮಾಡಿದರು.
ನಮ್ಮ ಗ್ರಾಮದಲ್ಲಿ ಹಾದುಹೋಗಿರುವ ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿದೆ.ಈ ರಸ್ತೆಗೆ ಗ್ರಾಮದ ಮುಂದೆ ಅಂಡರ್ ಪಾಸ್ ನೀಡದೆ ಅನತಿ ದೂರದಲ್ಲಿ ಅವೈಜ್ಞಾನಿ ಕಅಂಡರ್ಪಾಸ್ ನಿರ್ಮಿಸಿದ್ದಾರೆ ಎಂದು ಗ್ರಾಮದ ಯುವಕರು ಸಮಿತಿ ಸದಸ್ಯರ ಗಮನಸೆಳೆದರು. ಕತ್ತಲ ವೇಳೆ ಬಳಸಿಕೊಂಡು ತಿರುಗಾಡುವ ಸನ್ನಿವೇಶ ನಿರ್ಮಾಣವಾಗುತ್ತದೆ. ಈ ಬಗ್ಗೆ ಯಾವುದೇ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ಗ್ರಾಮಸ್ಥರ ಎಲ್ಲಾ ಮನವಿಗಳನ್ನು ತದೇಕಚಿತ್ತದಿಂದ ಆಲಿಸಿದ ಸಮಿತಿಯ ಸದಸ್ಯರು, ಪ್ರತಿಯೊಂದಕ್ಕೂ ಅಧಿಕಾರಿಗಳಿಂದ ಮಾಹಿತಿ ಪಡೆಯುವ ಕೆಲಸ ಮಾಡಿದರು.ಕೂಡಲೇ ಈ ರಸ್ತೆಗೆ ಗ್ರಾಮದ ಮುಂದೆಯೇ ಅಂಡರ್ ಪಾಸ್ ನಿರ್ಮಾಣವಾಗಬೇಕು ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಬೇಕುಎಂದು ಸಂಬಂಧಪಟ್ಟವರಿಗೆ ಸೂಚಿಸಲಾಯಿತು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು