ಕಳಪೆ ಹೆಲ್ಮೆಟ್ ದಂಧೆ, ಎರಡೇ ದಿನದಲ್ಲಿ ಒಂದೂವರೆ ಲಕ್ಷ ದಂಡ, ಅರಿವು ಪ್ರಯತ್ನ
ಚನ್ನಪಟ್ಟಣ: ಕಾಟಾಚಾರದ ಸವಾರರು
ಚನ್ನಪಟ್ಟಣ ತಾಲೂಕಿನಾದ್ಯಂತ ಬಹುತೇಕ ದ್ವಿಚಕ್ರ
ಸವಾರರ ತಲೆ ಮೇಲೆ ಬಣ್ಣಬಣ್ಣದ ತರಹೇವಾರಿ ಶಿರಸ್ತ್ರಾಣಗಳು (ಹೆಲ್ಮೆಟ್) ರಾರಾಜಿಸುತ್ತಿವೆ.
ಮನೆಯ ಮೂಲೆಯಲ್ಲಿ, ಅಟ್ಟದ ಮೇಲಿದ್ದ, ತಾತ್ಕಾಲಿಕವಾಗಿ ಇರಲೆಂದು ಹೊಸದಾಗಿ ಖರೀದಿಸಿದ ಹೆಲ್ಮೆಟ್ ಗಳೆಲ್ಲವೂ ತಲೆಯ ಮೇಲೆ ವಿರಾಜಮಾನಗೊಂಡಿವೆ, ನಮ್ಮ ಪ್ರಾಣ ಉಳಿಸಲೋಸುಗ ಹೆಲ್ಮೆಟ್ ಕಡ್ಡಾಯ ಮಾಡಿದ್ದಾರೆಂಬುದನ್ನು ಮರೆತು ಪೋಲಿಸರನ್ನು ಬೈದುಕೊಂಡು ಹೀಯಾಳಿಸಿಕೊಂಡು ಒಳ್ಳೆಯದೋ, ಕೆಟ್ಟದ್ದೋ ದಂಡ ಕಟ್ಟದಂತಿರಲಿ ಎಂಬುದಷ್ಟೇ ಅವನ ತಲೆಯಲ್ಲಿ ಹೊಕ್ಕಿರುವುದು ಚಾಲಕನ ಕುಟುಂಬದ ದುರಾದೃಷ್ಟ ಎನ್ನಬಹುದು.
*ಎರಡೇ ದಿನದಲ್ಲಿ ಲಕ್ಷಾಂತರ ರೂಪಾಯಿ ದಂಡ*
ಮೊದಲ ದಿನ ಅಂದರೆ ಆಗಸ್ಟ್ ೧೫ ನೇ ಸ್ವಾತಂತ್ರ್ಯ ದಿನಾಚರಣೆಯ ದಿನ ಸಂಚಾರಿ ಪೋಲೀಸರೇ ೬೦೫ ದ್ವಿಚಕ್ರ ವಾಹನಗಳ ಸವಾರರಿಗೆ ತಲಾ ೧೦೦ ರೂಪಾಯಿ ದಂಡ ವಿಧಿಸಿದರೆ, ಇನ್ನಿತರ ಠಾಣೆಯ ಪೋಲಿಸರು ೨೫೦ ಸವಾರರಿಗೆ ದಂಡ ವಿಧಿಸಿದ್ದು ಇಂದೂ ಸಹ (೧೬/೦೮) ಅನೇಕ ಸವಾರರಿಗೆ ದಂಡ ವಿಧಿಸಲಾಗಿದ್ದು ೧,೫೦,೦೦೦ ದಂಡ ಸಂಗ್ರಹ ವಾಗಿರಬಹುದು ಎಂದು ಸಂಚಾರಿ ಪೋಲಿಸ್ ಠಾಣೆಯ ಪಿ ಎಸ್ ಐ ಶಿವಕುಮಾರ್ ತಿಳಿಸಿದ್ದಾರೆ.
*ಅರಿವು ಮೂಡಿಸಲು ಪೋಲಿಸರ ಜಾಥಾ*
ನಗರದಾದ್ಯಂತ ಎರಡು ಪೋಲಿಸ್ ಜೀಪುಗಳು ಮತ್ತು ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಧರಿಸಿದ ಸಿಬ್ಬಂದಿಗಳು ಜಾಥಾ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಕೇವಲ ಕಾನೂನು ಮತ್ತು ಪೋಲಿಸರಿಗೆ ಹೆದರಿ ಹೆಲ್ಮೆಟ್ ಧರಿಸುವುದು ಬೇಡ, ತಮ್ಮ ಅತ್ಯಮೂಲ್ಯ ಪ್ರಾಣ ರಕ್ಷಣೆ ಹಾಗೂ ತಮ್ಮ ಕುಟುಂಬದ ರಕ್ಷಣೆಗಾಗಿ ಹೆಲ್ಮೆಟ್ ಧರಿಸಬೇಕೆಂದು ತಿಳಿಸಿದರು.
*ಐಎಸ್ಐ ಇಲ್ಲದ ಹೆಲ್ಮೆಟ್ ದಂಧೆ*
ಪೋಲಿಸರು ಹೆಲ್ಮೆಟ್ ಧರಿಸದ ಸವಾರರಿಗೆ ದಂಡ ವಿಧಿಸುತ್ತಿರುವುದನ್ನೇ ಬಂಡವಾಳ ಮಾಡಿಕೊಂಡ ಅನೇಕ ಹೆಲ್ಮೆಟ್ ವ್ಯಾಪಾರಿಗಳು *ಐಎಸ್ಐ* ಮುದ್ರೆ ಇಲ್ಲದ ಕನಿಷ್ಠ ಗುಣಮಟ್ಟದ ಕೇವಲ ೧೫೦ ರೂಪಾಯಿಗಳ ಹೆಲ್ಮೆಟ್ ಗಳನ್ನು ಮಾರುವ ಮೂಲಕ ಸವಾರರ ಪ್ರಾಣದ ಜೊತೆ ಚಲ್ಲಾಟವಾಡುತ್ತಿರುವುದು ಪೋಲಿಸರ ಎದುರೇ ನಡೆಯುತ್ತಿದ್ದರೂ ಸಹ ಪೋಲಿಸರು ಅವರ ವಿರುದ್ಧ ಕ್ರಮ ಕೈಗೊಳ್ಳದೇ ಗ್ರಾಹಕರ ವಿರುದ್ಧ ಮಾತ್ರ ಕೈಗೊಳ್ಳುತ್ತಿರುವುದು ಯಾವ ನ್ಯಾಯ ಎಂದು ಸಾರ್ವಜನಿಕರು.
*ಕಳಪೆ ಹೆಲ್ಮೆಟ್ ನಿಂದ ತಲೆಗೆ ಪೆಟ್ಟು ಮಾಡಿಕೊಂಡ ಶಿಕ್ಷಕಿ*
ಇಂದು (೧೬/೦೮) ಬೆಳಿಗ್ಗೆ ತನ್ನ ಮಗಳ ಜೊತೆ ಶಾಲೆಗೆ ಹೊರಟಿದ್ದ ಹಾರಿಜ್ಹಾನ್ ಶಾಲೆಯ ಮುಖ್ಯೋಪಾಧ್ಯಾಯಿನಿ ಮಂಜುಳಾರಾಜ್ ರವರು ಸಾತನೂರು ವೃತ್ತ ದ ಬಳಿ ಬರುತ್ತಿದ್ದಂತೆ ಆಕಸ್ಮಿಕ ಅಪಘಾತವಾಗಿದ್ದು ಆಕೆಯ ತಲೆಗೆ ಪೆಟ್ಟು ಬಿದ್ದು ಪ್ರಜ್ಞೆ ತಪ್ಪಿದ್ದಾರೆ, ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಲೆಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಚೇತರಿಕೆ ತುಸು ಕಷ್ಟವಾಗಬಹುದು ಎಂದು ಆಪ್ತ ಮೂಲಗಳು ತಿಳಿಸಿವೆ.
*ಅಪಘಾತ ಸಂದರ್ಭದಲ್ಲಿ ಅವರು ಕಳಪೆಯ ಅರ್ಧ ಭಾಗವಿರುವ ಹೆಲ್ಮೆಟ್ ಧರಿಸಿದ್ದರು, ಐಎಸ್ಐ ಮುದ್ರೆ ಇರುವ ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸಿದ್ದರೆ ತಲೆಗೆ ಪೆಟ್ಟು ಬೀಳುತ್ತಿರಲಿಲ್ಲ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದರು*
*ವ್ಹೀಲಿಂಗ್ ಕ್ರಮಕೈಗೊಳ್ಳಿ*
ದ್ವಿಚಕ್ರ ವಾಹನ ಸವಾರರಿಗೆ ಕೇವಲ ಹೆಲ್ಮೆಟ್ ಒಂದೇ ಅಲ್ಲದೆ ಹಲವಾರು ವಿದ್ಯಾರ್ಥಿಗಳು ಮತ್ತು ಕೆಲವು ಯುವಕರು *ವ್ಹೀಲಿಂಗ್* ಮಾಡುವುದು *ಸೈಲೆನ್ಸರ್ ನ ಫಿಲ್ಟರ್* ತೆಗೆದು ಜೋರಾದ ಶಬ್ದದೊಂದಿಗೆ ಅಡ್ಡಾದಿಡ್ಡಿ ಯಾಗಿ ಸಾಗಿ ದಾರಿಹೋಕರು ಮತ್ತು ಇನ್ನಿತರ ವಾಹನ ಸವಾರರಿಗೆ ಪ್ರಾಣ ಭೀತಿ ಉಂಟು ಮಾಡುತ್ತಿದ್ದು ಇವರ ಮೇಲೆ ನಿಗಾ ಇರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ ಒತ್ತಾಯಿಸಿದ್ದಾರೆ.
*ಗುಣಮಟ್ಟದ ಪೂರ್ಣಪ್ರಮಾಣದ ಹೆಲ್ಮೆಟ್ ಧಾರಣೆ ನಿಮ್ಮ ಪ್ರಾಣ ರಕ್ಷಣೆಗೆ ಹೊರತು ಪೋಲಿಸರ ಉದ್ದಾರಕ್ಕಲ್ಲ*
*ಗೋ ರಾ ಶ್ರೀನಿವಾಸ...*
*ಮೊ:9845856139.*
ಪ್ರತಿಕ್ರಿಯೆಗಳು