ಎಲ್ಲೆಡೆ ವಿಜೃಂಭಣೆಯಿಂದ ಜರುಗಿದ ರಾಸುಗಳ ಹಬ್ಬ ಸಂಕ್ರಾಂತಿ
ಚನ್ನಪಟ್ಟಣ: ಸಂಕ್ರಾಂತಿ ಹಬ್ಬ ಎಂದರೆ ರೈತನಿಗೆ ಸಡಗರವೋ ಸಡಗರ, ವರ್ಷಕ್ಕೊಮ್ಮೆ ಬರುವ ಈ ಸುಗ್ಗಿ ಹಬ್ಬದಲ್ಲಿ ರೈತ ಮತ್ತು ರೈತ ಕುಟುಂಬವಲ್ಲದೆ ತಾನು ಸಾಕಿರುವ ಜಾನುವಾರುಗಳು, ಅದರಲ್ಲೂ ದಿನನಿತ್ಯ ದುಡಿಯುವ ಎತ್ತುಗಳು ಮತ್ತು ಜೋಡಿ ಹಸುಗಳಿಗೆ ಇಂದು ಸಂಪೂರ್ಣ ವಿರಾಮವಿದ್ದು, ಸಂತೃಪ್ತ ಆಹಾರಗಳನ್ನು ತಿನ್ನಿಸಿ, ಮೈತೊಳೆದು, ಶೃಂಗರಿಸಿ ತಾತ್ಕಾಲಿಕವಾಗಿ ನಿರ್ಮಿಸಿದ ಸಂಕ್ರಮಣ ನ ಮೂರ್ತಿಯನ್ನು ಪೂಜಿಸಿ ಕಿಚ್ಚು ಹಾಯಿಸುವುದೇ ಸಂಕ್ರಾಂತಿ ಹಬ್ಬ.
ರಾಸುಗಳ ಜೊತೆಗೆ ಹೊಲಗದ್ದೆಗಳಲ್ಲಿ ಬೆಳೆದ ಬೆಳೆಯ ರಾಶಿಗೆ, ಜಾನುವಾರು ಗಳಿಗೆಂದೇ ಶೇಖರಿಸಿಟ್ಟ ಹುಲ್ಲು ಮೆದೆಗಳಿಗೂ ಸಹ ವಿಶೇಷ ಪೂಜೆ ಸಲ್ಲಿಸುತ್ತಾರೆ. ಕಣ ದಲ್ಲಿ ನೆಟ್ಟ ಮೇಟಿ ಗೆ ಹಸುವಿನ ಸಗಣಿ ಯನ್ನು ಅದರ ಮೇಲಿಟ್ಟು, ಸೆಗಣಿಗೆ ಅಣ್ಣೆ ಹೂವು, ಹುಚ್ಚೆಳ್ಳು ಹೂವುಗಳಿಂದ ಶೃಂಗರಿಸಿ ವಿಶೇಷ ಪೂಜೆ ನೆರವೇರಿಸಿದರು.
ನಗರವೂ ಸೇರಿದಂತೆ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿಯೂ ಇಂದು ಕಣ, ರಾಶಿ ಪೂಜೆಯ ಜೊತೆಗೆ ರಾಸುಗಳಿಗೆ ಕಿಚ್ಚು ಹಾಯಿಸಿದರು. ಪ್ರತಿ ಹಳ್ಳಿಗಳಲ್ಲೂ ಸಂಜೆ ಆರು ಗಂಟೆಯ ಅಂದರೆ ಗೋಧೂಳಿ ಸಮಯದಲ್ಲಿ ಸಣ್ಣದಾಗಿ ಹಚ್ಚಿದ ಬೆಂಕಿಯಲ್ಲಿ ರಾಸುಗಳನ್ನು ಹಾರಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನು ಸಡಗರದೊಂದಿಗೆ ಆಚರಿಸಿದರು.
ಈ ಹಬ್ಬದ ಸಂದರ್ಭದಲ್ಲಿ ಪುಟ್ಟ ಮಕ್ಕಳು ಸೇರಿದಂತೆ ಅನೇಕ ಹೆಣ್ಣು ಮಕ್ಕಳು ದೇಸೀಯ ರೀತಿಯಲ್ಲಿ ಶೃಂಗರಿಸಿಕೊಂಡು ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು ಎಂಬ ಆಶಯದೊಂದಿಗೆ ಅಕ್ಕಪಕ್ಕದ ಮನೆಗಳಿಗೆ, ಸ್ನೇಹಿತೆಯರ ಮನೆ ಮನೆಗೆ ಸಡಗರದೊಂದಿಗೆ ತೆರಳಿ ಎಳ್ಳುಬೆಲ್ಲ ಬೀರಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು