ಅಮೂಲ್ಯ ಜೊತೆಗೆ ಆಯೋಜಕರನ್ನು ಗಡಿಪಾರು ಮಾಡಲಿ ಹಿಂಜಾವೇ
ಚನ್ನಪಟ್ಟಣ:ಫೆ/೨೧/೨೦/ಶುಕ್ರವಾರ.
ಪಾಕಿಸ್ತಾನದ ಪರ ಘೋಷಣೆ ಕೂಗಿ ಅನ್ನ ತಿನ್ನುತ್ತಿರುವ ದೇಶಕ್ಕೆ ದ್ರೋಹ ಬಗೆದ ಅಮೂಲ್ಯ ಜೊತೆಗೆ, ಈಕೆಯನ್ನು ವೇದಿಕೆಗೆ ಕರೆಸಿದ ಆಯೋಜಕರು ಮತ್ತು ಈಕೆಗೆ ಪ್ರೋತ್ಸಾಹ ನೀಡುತ್ತಿರುವವರನ್ನು ದೇಶದ್ರೋಹಿಗಳು ಎಂದು ಪರಿಗಣಿಸಿ ಕಠಿಣ ಶಿಕ್ಷೆ ನೀಡಬೇಕು, ಅಥವಾ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಹಿಂದೂಜಾಗರಣಾ ವೇದಿಕೆ ನೇತೃತ್ವದಲ್ಲಿ ಹಿಂದೂಪರ ಸಂಘಟನೆಗಳು ನಗರದಲ್ಲಿ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿಸ್ಮಾರಕ ಭವನದ ಬಳಿ ಪ್ರತಿಭಟನೆ ನಡೆಸಿದ ಹಿಂದೂಪರ ಸಂಘಟನೆಗಳು, ಅಮೂಲ್ಯ ಲಿಯೋನ್ ಒಬ್ಬಳೇ ಈ ರೀತಿ ಘೋಷಣೆ ಕೂಗಿಲ್ಲ, ಅವಳಿಗೆ ಸಾಕಷ್ಟು ಮಂದಿ ಪ್ರಚೋದನೆ ನೀಡಿದ್ದು, ಅವರೆಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸ ಬೇಕು. ಈಕೆ ಈ ಹಿಂದೆಯೂ ದೇಶದ್ರೋಹದ ಭಾಷಣ ಮಾಡಿದ್ದು, ಸಿರಿಮನೆ ಎಂಬ ನಕ್ಸಲ್ ಸಂಘಟನೆಯ ಜತೆ ಸಂಬಂಧ ಹೊಂದಿದ್ದಾಳೆ, ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿ ಕಠಿಣ ಶಿಕ್ಷೆ ವಿಧಿಸ ಬೇಕು ಎಂದು ಆಗ್ರಹಿಸಿದರು.
*ಪಾಕಿಸ್ತಾನಕ್ಕೆ ಕಳುಹಿಸಿ ಬಿಡಿ:*
ನಮ್ಮ ನೆಲದಲ್ಲಿ ಇದ್ದು ಪಾಕಿಸ್ತಾನದ ಬಗ್ಗೆ ಪ್ರೀತಿ ತೋರುವ ಈಕೆ ಮತ್ತು ಇದೇ ರೀತಿ ಘೋಷಣೆ ಕೂಗುವ ಎಲ್ಲರನ್ನೂ ಆ ದೇಶಕ್ಕೆ ಕಳುಹಿಸಿಬಿಡಿ ಎಂದು ಆಗ್ರಹಿಸಿದ ಅವರು, ಪಾಕಿಸ್ತಾನದ ಯಾವುದೇ ಪ್ರದೇಶಕ್ಕೆ ಹೋಗುವುದಾದರೆ ನಮ್ಮ ಸಂಘಟನೆಯೇ ಅವರ ಪ್ರಯಾಣದ ಎಲ್ಲಾ ಖರ್ಚು ವೆಚ್ಚವನ್ನು ಭರಿಸಲಿದೆ ಎಂದು ತಿಳಿಸಿದರು.
*ಸಿಎಎ ವಿರೋಧಿಗಳ ಅಸಲಿಯತ್ತು ಬಯಲಾಗಿದೆ:*
ಸಿಎಎ ವಿರುದ್ಧ ದೇಶವ್ಯಾಪಿ ನಡೆಯುತ್ತಿರುವ ಹೋರಾಟಕ್ಕೆ ಪಾಕಿಸ್ತಾನ ಮೂಲದಿಂದ ಹಣ ಬರುತ್ತಿರುವ ಬಗ್ಗೆ ಇತ್ತೀಚಿಗೆ ಕೇಂದ್ರ ಸರ್ಕಾರ ವರದಿ ನೀಡಿತ್ತು. ಇದೀಗ ವೇದಿಕೆಯಲ್ಲಿ ಅಮೂಲ್ಯ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುವ ಮೂಲಕ ಹೋರಾಟದ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಬಹಿರಂಗ ಪಡಿಸಿದ್ದಾರೆ. ದೇಶವನ್ನು ಅಸ್ಥಿರ ಗೊಳಿಸಲು ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರುವುದು ಇದರಿಂದ ಸಾಬೀತಾಗಿದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.
*ದೇಶದ್ರೋಹಿಗಳಿಗೆ ಗುಂಡಲ್ಲದೆ ಹೂ ಎರಚಬೇಕೆ:*
ಪ್ರತಿಭಟನೆಯನ್ನುದ್ದೇಶಿ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಗಜೇಂದ್ರ ಸಿಂಗ್, ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧಪಕ್ಷಗಳು ಪೊಲೀಸರನ್ನು ದೂರುತ್ತಿವೆ. ಕಲ್ಲು ತೂರುತ್ತಿದ್ದವರ, ಪೆಟ್ರೋಲ್ ಬಾಂಬ್ ಎಸೆಯಿತ್ತಿದ್ದವರ ಮೇಲೆ ಗುಂಡು ಹಾರಿಸದೆ, ಹೂ ಎರಚಬೇಕಿತ್ತೆ, ಪೋಲೀಸರಿಗೆ ಗುಂಡು ನೀಡಿರುವುದು ಇಂತಹ ದೇಶದ್ರೋಹಿಗಳು, ಸಮಾಜಘಾತುಕರನ್ನು ಮಟ್ಟಹಾಕಲೋ ಇಲ್ಲ, ಆಯುಧ ಪೂಜೆ ಮಾಡಲೋ ಎಂದು ಪ್ರಶ್ನಿಸಿದರು.
ವೇದಿಕೆಯ ಕಾರ್ಯದರ್ಶಿ ಸುರೇಶ್ ಮಾತನಾಡಿ ಅಮೂಲ್ಯ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುವ ವೇಳೆ ವೇದಿಕೆಯ ಮೇಲಿದ್ದವರಿಂದ ಎಕ್ಸ್ಫೋಸ್ ಅಂತಲೂ, ನೆರೆದಿದ್ದವರಿಂದಲೂ ಸಹ ಜಿಂದಾಬಾದ್ ಎಂಬ ಧ್ವನಿ ಬರುತ್ತಿರುವುದು ವಿಡಿಯೋ ದಲ್ಲಿ ಕೇಳಿಸುತ್ತಿದೆ. ಮೊದಲಿನಿಂದಲೂ ಹಿಂದೂಗಳ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದ್ದು ಈಗ ದೇಶದ ಮೇಲೆ ನಡೆಯುತ್ತಿದೆ. ಅಂದು ಶಿವಾಜಿ ಮಹಾರಾಜರು ಹಿಂದೂಗಳನ್ನು ರಕ್ಷಿಸಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ವಿರುದ್ದವೇ ಕೆಲ ಅವಿವೇಕಿಗಳು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಶಿವಾಜಿ ಮಹಾರಾಜರಂತಹ ದೇಶ ಭಕ್ತರ ಅವಶ್ಯಕತೆ ಇಂದು ಇದೆ ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಹಿಂಜಾವೇ ಪದಾಧಿಕಾರಿಗಳಾದ ಸುರೇಶ್, ಎಲೇಕೇರಿ ರವೀಶ್, ಧನಂಜಯ, ಬಿಜೆಪಿ ಅಧ್ಯಕ್ಷ ಆನಂದಸ್ವಾಮಿ, ಜಿಪಂ ಮಾಜಿ ಸದಸ್ಯ ಸದಾನಂದ, ಸ್ವ್ವರಾಜ್ ಸಂಘಟನೆಯ ಸುಕನ್ಯಾ, ಮಾತೃಭೂಮಿ ಸೇವಾಟ್ರಸ್ಟ್ನ ಮಹೇಶ್, ಗುತ್ತಿಗೆದಾರರ ಚಕ್ಕೆರೆ ರಾಜಶೇಖರ್, ಏರ್ಟೆಲ್ ನವೀನ್ ಇನ್ನೂ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು