ಆರೋಗ್ಯಕ್ಕಾಗಿ ಸರ್ಕಾರದ ಯೋಜನೆಗಳ ಜೊತೆಗೆ ಸಾಂಪ್ರದಾಯಿಕ ಆಹಾರ ಪದ್ದತಿ ಅಳವಡಿಸಿಕೊಳ್ಳಬೇಕಾಗಿದೆ ಹರೂರು ರಾಜಣ್ಣ
ಚನ್ನಪಟ್ಟಣ: ಇಪ್ಪತ್ತು, ಮೂವತ್ತರ ದಶಕದ ಮೊದಲು ಸಿಜೇರಿಯನ್ ಎಂದರೆ ಏನೆಂದು ತಿಳಿಯದ ನಾವುಗಳು ಇಂದು ಸಹಜ ಹೆರಿಗೆಯಾಯಿತು, ಎಂದರೆ ಹುಬ್ಬೇರಿಸುವಂತಾಗಿದೆ ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ ಆತಂಕದಿಂದ ಹೇಳಿದರು.
ಅವರು ಇಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ವತಿಯಿಂದ ನಗರದ ಸ್ತ್ರೀ ಶಕ್ತಿ ಭವನದಲ್ಲಿ ಆಯೋಜಿಸಿದ್ದ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾವಯವ ಮತ್ತು ಸಾಂಪ್ರದಾಯಿಕ ವ್ಯವಸಾಯದ ಮೂಲಕ ಬೆಳೆದ ಸೊಪ್ಪು, ತರಕಾರಿ, ಕಾಳು ಮತ್ತು ಧವಸ ಧಾನ್ಯಗಳನ್ನು ತಿನ್ನುವುದರ ಜೊತೆಗೆ ಒಟ್ಟುಕುಟುಂಬದಲ್ಲಿದ್ದುದರಿಂದ ಮನೆಗೆಲಸ ಹಾಗೂ ವ್ಯವಸಾಯದ ಕೆಲಸಗಳಲ್ಲಿ ಮಹಿಳೆಯರು ತೊಡಗಿಸಿಕೊಳ್ಳುತ್ತಿದ್ದುದರು. ಆದ್ದರಿಂದ ದೇಹಕ್ಕೆ ಆರೋಗ್ಯದ ಜೊತೆಗೆ ವ್ಯಾಯಾಮವು ಸಿಗುತ್ತಿತ್ತು. ಆಧುನಿಕ ಕಾಲದಲ್ಲಿ ತಂತ್ರಜ್ಞಾನ ಹಾಗೂ ಆಸ್ಪತ್ರೆಯ ಔಷಧಗಳಿಗೆ ಮೊರೆಹೋದ ಕಾರಣ, ತಾಯಿ ಮತ್ತು ಮಗುವಿನ ಆರೋಗ್ಯವು ಕೆಡುತ್ತಿದ್ದು, ನಮ್ಮ ಹಿಂದಿನ ಜೀವನ ಪುನಾರವರ್ತನೆಯಾಗಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಹಶಿಲ್ದಾರ್ ಸುದರ್ಶನ್ ರವರು ಶಿಶು ಆರೋಗ್ಯವಾಗಿರಬೇಕೆಂದರೆ ತಾಯಿ ಆರೋಗ್ಯವಾಗಿರಬೇಕು, ಆಕೆ ಗರ್ಭಿಣಿಯಿದ್ದಾಗಲೇ ಪೌಷ್ಟಿಕಾಹಾರವನ್ನು ಸೇವಿಸಿದರೆ ಮಗು ಆರೋಗ್ಯಕರವಾಗಿ ಜನಿಸುವುದರಲ್ಲಿ ಅನುಮಾನವಿಲ್ಲ. ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡು ಯಾವಾಗ, ಎಷ್ಟು ಮತ್ತು ಹೇಗೆ ತಿನ್ನಬೇಕೆಂಬುದನ್ನು ತಿಳಿದು ತಿಂದರೆ ಅದೇ ನಮ್ಮ ಆರೋಗ್ಯ ಎಂದು ಅಭಿಪ್ರಾಯ ಪಟ್ಟರು.
ತಾಲ್ಲೂಕು ವೈದ್ಯಾಧಿಕಾರಿ ಡಾ ರಾಜು ಮಾತನಾಡಿ ನಮ್ಮ ಸಂಪ್ರದಾಯ ದ ಅಡುಗೆಯಲ್ಲಿ ಹೇರಳವಾದ ಪೌಷ್ಟಿಕಾಂಶ ಗಳಿದ್ದು, ಗರ್ಭಿಣಿಯರು ಮತ್ತು ಬಾಣಂತಿಯರು ಉಪಯೋಗಿಸಿದರೆ ಶಿಶುವಿನ ಆರೋಗ್ಯ ಉತ್ತಮವಾಗಿರುತ್ತದೆ. ಫಾಸ್ಟ್ ಫುಡ್ ಸಂಸ್ಕೃತಿಯನ್ನು ಬಿಟ್ಟು ಮೊಳಕೆ ಕಾಳು, ಗೆಡ್ಡೆಗೆಣಸು, ಸೊಪ್ಪು ತರಕಾರಿಗಳನ್ನು ಬಳಸಿದರೆ ಆರೋಗ್ಯದಲ್ಲಿ ಏರುಪೇರಾಗುವುದಿಲ್ಲ ಎಂದರು.
ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳು ಆರಂಭಿಸಿದ ಯೋಜನೆಗಳನ್ನು ಸ್ಥಳೀಯ ಅಧಿಕಾರಿಗಳು ಕಾರ್ಯರೂಪಕ್ಕೆ ತರಬೇಕು. ಮುಂದಿನ ಪೀಳಿಗೆಗೆ ಅನುಕೂಲ ಆಗುವಂತಹ ಪೋಷಣ್ ಪಕ್ವಾಡ್ ಕಾರ್ಯಕ್ರಮ ದ ಯೋಜನೆಯು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೇಲೆ ಅವಲಂಬಿತವಾಗಿದ್ದು ಇದನ್ನು ಗರ್ಭಿಣಿ ಮತ್ತು ಬಾಣಂತಿಯರಿಗೆ ತಿಳಿಸಿ ಪೌಷ್ಟಿಕಾಹಾರವನ್ನು ನೀಡಬೇಕು ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಚಂದ್ರು ತಿಳಿಸಿದರು.
ಇದೇ ವೇಳೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪೋಷಕರಿಗೆ ಕಾರ್ಯಕ್ರಮದ ಅರಿವು ಮೂಡಿಸಲಾಯಿತು.
ಕೆಲವು ಗರ್ಭಿಣಿಯರಿಗೆ ವಿಶೇಷವಾಗಿ ಮಡಿಲಕ್ಕಿ (ಮಡಿಲ ಹುಡಿ) ತುಂಬಿ ಸೀಮಂತ ಕಾರ್ಯವನ್ನು ಮಾಡಲಾಯಿತು.
ನಿನ್ನೆ ಆರಂಭವಾಗಬೇಕಾಗಿದ್ದ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಉದ್ಘಾಟನೆ ಮತ್ತು ಇಂದು ಆರಂಭವಾಗಬೇಕಾಗಿದ್ದ ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮ ಎರಡೂ ಇಂದೇ ಉದ್ಘಾಟನೆ ಭಾಗ್ಯ ಕಂಡವು.
೦೮/೦೩/೨೦ ರ ಭಾನುವಾರ ದಿಂದ ೨೦/೦೩/೨೦ ರ ಶುಕ್ರವಾರ ರ ತನಕ ಅಂಗನವಾಡಿ ಕೇಂದ್ರಗಳಲ್ಲಿ, ಕಿಶೋರಿಯರು ಮತ್ತು ಗರ್ಭಿಣಿಯರಿಗೆ ರಕ್ತ ತಪಾಸಣಾ ಶಿಬಿರ, ಆರೋಗ್ಯವಂತ ಮಕ್ಕಳ (ಬೇಬಿ) ಪ್ರದರ್ಶನ, ಐಎಲ್ಎ ತರಬೇತಿ, ಸ್ವಸಹಾಯ ಗುಂಪಿನ ಸದಸ್ಯರುಗಳ ಪೂರಕ ಆಹಾರ ಮತ್ತು ಪೋಷಣೆಯ ಬಗ್ಗೆ ಮಾಹಿತಿ, ಪೋಷಣ್ ರಥ ಪ್ರಾಜೆಕ್ಟ್, ಶಾಲೆ ಬಿಟ್ಟ ಕಿಶೋರಿಯರಿಗೆ ಅಥವಾ ಹದಿಹರೆಯದ ಹೆಣ್ಣು ಮಕ್ಕಳಿಗೆ ಪೌಷ್ಟಿಕಾಂಶದ ಬಗ್ಗೆ ಮಾಹಿತಿ, ಸಮುದಾಯದ ಜೊತೆಗೂಡಿ ಅಂಗನವಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಚಗೊಳಿಸುವುದು, ಸೀಮಂತ ಮತ್ತು ಅನ್ನ ಪ್ರಾಶನ, ಕಳೆದ ತಿಂಗಳ ಸಭೆಯ ನಡಾವಳಿ ಮತ್ತು ಸಮಸ್ಯೆಯ ಮೇಲ್ವಿಚಾರಣೆ, ಸಮುದಾಯ ಆಧಾರಿತ ಚಟುವಟಿಕೆ, (ಸುಪೋಷಣಾ ದಿವಸ ಪುರುಷರು ಭಾಗವಹಿಸುವಿಕೆ) ಬೆಂಕಿ ಇಲ್ಲದೆ ಅಡುಗೆ, (ಸಲಾಡ್, ಕೋಸಂಬರಿ, ಮತ್ತು ಮೊಳಕೆ ಕಾಳಿನ ಸಲಾಡ್ ಇತ್ಯಾದಿ) (ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಪುರುಷರಿಗೆ ತಲಾ ೧೦೦ ರೂಪಾಯಿಗಳನ್ನು ಕೊಡಲಾಗುವುದು.) ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿಶು ಅಭಿವೃದ್ಧಿ ಅಧಿಕಾರಿ ಕಾಂತರಾಜು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಇಲಾಖೆಯ ಅಹಲ್ಯಾ ಮತ್ತು ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು, ಅಂಗನವಾಡಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿ ಯಶೋಧಮ್ಮ ಮತ್ತು ಪದಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮತ್ತು ಪೋಷಕರು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು