ಸಿಇಓ ಇಕ್ರಂ ರವರ ಕಲ್ಪನೆಯಲ್ಲಿ ಅರಳಿದ ಮೈಲನಾಯಕನಹಳ್ಳಿ ಗ್ರಾಮದ ಅಂಗನವಾಡಿ
ಚನ್ನಪಟ್ಟಣ ತಾಲ್ಲೂಕಿನ ಮೈಲನಾಯಕನಹಳ್ಳಿ ಗ್ರಾಮದಲ್ಲಿ ಸುಂದರವಾದ ಅಂಗನವಾಡಿ ಕೇಂದ್ರ ನಿರ್ಮಾಣವಾಗಿದೆ. ಇದಕ್ಕೆ ಮೂಲ ಕಾರಣಕರ್ತ ರಾಮನಗರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ರವರು.
ಅವರ ಆಸ್ಥೆಯಿಂದ ತಾಲ್ಲೂಕಿನಲ್ಲಿ ಪುಟ್ಟ ಮಕ್ಕಳಿಗೆ ಸ್ವರ್ಗ ಎಂದರೇನೆಂಬುದನ್ನು ತೋರಿಸಿಕೊಟ್ಟಿದ್ದಾರೆ.
ಕೋವಿಡ್ ಸಮಯದಲ್ಲಿ ಅಂಗನವಾಡಿಯ ಸುಂದರ ಪರಿಕಲ್ಪನೆಗಾಗಿಯೇ ಅವರು ಎರಡು ದಿನಗಳ ಕಾಲ ತೆಲಂಗಾಣಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಅಂಗನವಾಡಿ ಕೇಂದ್ರಗಳನ್ನು ನೋಡಿ ಬಂದ ಅವರು ಕೈಕಟ್ಟಿ ಕೂರಲಿಲ್ಲ. ತಲೆಯಲ್ಲಿ ತುಂಬಿಕೊಂಡು ಬಂದಂತಹ ಕನಸನ್ನು ತಮ್ಮದೇ ರೀತಿಯಲ್ಲಿ ಡ್ರಾಯಿಂಗ್ ಬಿಡಿಸಿದ ಅವರು ಪ್ಲಾನಿಂಗ್ ರೂಪಿಸಿ, ಕಾರ್ಯಗತಗೊಳಿಸಲು ಸಜ್ಜಾದರು. ಜಿಲ್ಲಾ ಪಂಚಾಯತಿ ಸಹಯೋಗದೊಂದಿಗೆ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮುತುವರ್ಜಿಯಿಂದ ಈ ಅಂಗನವಾಡಿ ರೂಪುಗೊಂಡಿದೆ.
ಅದರ ಫಲವಾಗಿಯೇ ಇಂದು ತಾಲ್ಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಹಸುಕಂದಮ್ಮಗಳಿಗೆ, ಆಟವಾಡಲು, ಭೋಜನ ಮಾಡಲು, ಪಾಠ ಕೇಳಲು, ನಿದ್ರಿಸಲು ಅನುಕೂಲವಾಗುವಂತಹ ಸುಂದರ ತಾಣವನ್ನಾಗಿ ಮಾರ್ಪಡಿಸಿದ್ದಾರೆ. ಘನತ್ಯಾಜ್ಯದಿಂದ ವರ್ಟಿಕಲ್ ಗಾರ್ಡನ್, ಮರಳಿನಲ್ಲಿ ಆಟವಾಡಲು ಸುಂದರ ಮೈದಾನ, ನಿರುಪಯೋಗಿ ಮರದ ತುಣುಕುಗಳಿಂದ ಪೀಠೋಪಕರಣ, ಪೋಷಕಾಂಶಗಳ ಕೈದೋಟ, ಚನ್ನಪಟ್ಟಣ ಗೊಂಬೆಗಳ ಆಟಿಕೆಗಳು, ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ಸೇರಿದಂತೆ ಹಲವಾರು ವಿಹಂಗಮಗಳನ್ನು ಇಲ್ಲಿ ನೋಡಬಹುದು.
ಯಾವುದೇ ಖಾಸಗಿ ಶಿಶುವಿಹಾರವನ್ನು ನಾಚಿಸುವಂತಹ ಅಂಗನವಾಡಿ ಇದಾಗಿದ್ದು, ಮಕ್ಕಳಿಗೆ ಸ್ವರ್ಗವನ್ನೇ ಕೈಗೆಟುಕುವಂತೆ ಮಾಡಿರುವ ಸಿಇಓ ಇಕ್ರಂ ರವರಿಗೆ ತಾಲ್ಲೂಕಿನ ಸಿಡಿಪಿಓ ಸಿದ್ದಲಿಂಗಯ್ಯ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆ ಗೋಪಮ್ಮ ಹಾಗೂ ಪೋಷಕರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಇಂದಿನ ತಂದೆತಾಯಿಗಳು, ಅಂಗನವಾಡಿ ರೂಪದಲ್ಲೇ ಶಾಲೆಗಳನ್ನು ಅತ್ಯಾಧುನಿಕವಾಗಿ ಮಾರ್ಪಾಡು ಮಾಡಿದರೆ ಶಾಲೆಗಳು ಮುಚ್ಚುವ ಪ್ರಮೇಯ ಎದುರಾಗದು ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಒಟ್ಟಾರೆ ಸಿಇಓ ರವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು