ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದ ಮನೆಯೊಂದರಲ್ಲಿ ಮಂಗಳವಾರ ನಗನಗದು ಮತ್ತು ಮನೆಯ ಸಾಮಾನು ಕಳ್ಳತನ
ಚನ್ನಪಟ್ಟಣ.ಜು.29: ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದ ಮನೆಯೊಂದರಲ್ಲಿ ಮಂಗಳವಾರ ನಗನಗದು ಮತ್ತು ಮನೆಯ ಸಾಮಾನು ಕಳ್ಳತನವಾಗಿದ್ದು, ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸರ್ವೆನಂ 60/2 ಮತ್ತು 33/2 ರ ಜಮೀನಿನಲ್ಲಿ ಹೆಚ್.ಎನ್ ಶಿವಕುಮಾರ್ ಬಿನ್ ಲೇಟ್ ನಾಗರಾಜು ಎಂಬುವವರು ಮನೆ ನಿರ್ಮಿಸಿಕೊಂಡು ವಾಸವಾಗಿದ್ದಾರೆ.
ಜು.26 ರ ಬೆಳಿಗ್ಗೆ ಶಿವಕುಮಾರ್ ಅವರ ಹೆಂಡತಿಯ ತವರುಮನೆ ಕೆರೆಮೇಗಳದೊಡ್ಡಿಗೆ ಸಂಸಾರ ಸಮೇತ ಹೋಗಿದ್ದು, 28 ರ ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ಬಾಗಿಲು ಮೀಟಿರುವುದು ಕಂಡು ಬಂದಿದ್ದು, ಗ್ರಾಮಾಂತರ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ.
ಪೊಲೀಸರ ಸಮಕ್ಷಮದಲ್ಲಿ ಮನೆಯನ್ನು ಪರಿಶೀಲಿಸಿದಾಗ, ಮನೆಯ ಮುಖ್ಯದ್ವಾರವನ್ನು ಮೀಟಲು ಪ್ರಯತ್ನಿಸಿದ್ದು, ಸಾಧ್ಯವಾಗದ ಕಾರಣ ಮೇಲಂತಸ್ಥಿನ ನೀರಿನ ಟ್ಯಾಂಕ್ ಬಾಗಿಲನ್ನು ಮೀಟಿ, ಒಳಗೆ ಬಂದು ಕಳ್ಳತನ ಮಾಡಲಾಗಿದೆ.
ಕೊಠಡಿಯೊಂದರಲ್ಲಿದ್ದ ಬೀರುವಿನ ಬಾಗಿಲನ್ನು ಒಡೆದು, 1 ಬೆಳ್ಳಿ ಚೊಂಬು, ಬೆಳ್ಳಿ ತಟ್ಟೆ, ಎರಡು ಬೆಳ್ಳಿ ದೀಪಾಲೆಕಂಬ ಒಟ್ಟು 800 ಗ್ರಾಂ ಇದ್ದು, ಇದರ ಬೆಲೆ 30 ಸಾವಿರ ರೂಗಳಾಗಿದ್ದು. ಹಾಗೂ 50 ಸಾವಿರ ಬೆಲೆ ಬಾಳುವ 25 ಗ್ರಾಂನ ಚಿನ್ನದ 6 ಜೊತೆ ಸಣ್ಣ ಓಲೆಗಳು, 10 ಸಾವಿರ ಚಿಲ್ಲರೆ ಹಣ, 25 ಸಾವಿರ ರೂ ನಗದು, 10 ಸಾವಿರ ಬೆಲೆ ಬಾಳುವ 8 ರೇಷ್ಮೆಸೀರೆಗಳು, 2 ಸಾವಿರ ಬೆಲೆಯ ಹಿತ್ತಾಳೆ ಹಂಡೆ, 3 ಸಾವಿರ ಬೆಲೆಯ ಗ್ಯಾಸ್ ಸಿಲಿಂಡರ್ ನ್ನು ಕದ್ದೊಯ್ದಿದ್ದಾರೆ. ಇದರ ಜೊತೆಗೆ ಮನೆಯ ನಲ್ಲಿಗಳನ್ನೂ ಸಹ ಮುರಿದು, ವಿಕೃತಿ ಮೆರೆದಿದ್ದಾರೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶಿವಕುಮಾರ್ ದೂರು ನೀಡಿದ್ದಾರೆ.
ಗ್ರಾಮಾಂತರ ಪೊಲೀಸರು ಹಾಗೂ ಬೆರಳಚ್ಚು ತಜ್ಞರು, ಶ್ವಾನದಳದೊಂದಿಗೆ ಮನೆಯನ್ನು ಪರಿಶೀಲಿಸಿ, ಠಾಣಾ ಮೊಕದ್ದಮೆ 98/2021 ಕಲಂ 454,457,380 ಐಪಿಸಿ ಸೆಕ್ಷನ್ ಅಡಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು