ಪ್ರಸಿದ್ಧ ಅಯ್ಯನ ಗುಡಿ ಜಾತ್ರೆ ರದ್ದು: ಭಕ್ತರ ನಿರಾಸೆ
ಚನ್ನಪಟ್ಟಣ ತಾಲೂಕಿನ ಮೈಸೂರು ಬೆಂಗಳೂರು ರಸ್ತೆಯಲ್ಲಿರುವ ಪುರಾಣೇತಿಹಾಸ ಕೆಂಗಲ್ ಆಂಜನೇಯ ಸ್ವಾಮಿಯ ಭಾರೀ ದನಗಳ ಜಾತ್ರೆಯು ಕೊರೋನಾ ಕಾರಣದಿಂದ ರದ್ದಾಗಿದೆ ಎಂದು ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ತಮ್ಮೇಗೌಡ ಎನ್ ತಿಳಿಸಿದರು.
ಕೊರೊನಾ ಹೆಚ್ಚಾಗಿರುವ ಕಾರಣ ಜಾತ್ರೆಯನ್ನು ರದ್ದು ಮಾಡಲಾಗಿದೆ. ದೇವಾಲಯಕ್ಕೆ ಬರುವ ಭಕ್ತರಿಗೂ ಸಹ ನಿರ್ಬಂಧ ಹಾಕಲಾಗಿದೆ. ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು, ಕೇವಲ ದರ್ಶನ ಮಾತ್ರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಳೆದ ವರ್ಷವೂ ಇದೇ ಸಮಯದಲ್ಲಿ ನಿಷೇಧ ಹೇರಲಾಗಿತ್ತು. ಆ ಸಮಯದಲ್ಲಿ ಹೊರಗಿನಿಂದ ಹಲವಾರು ಭಕ್ತರು ರಾಸುಗಳ ಸಮೇತ ಬಂದಿದ್ದರಿಂದ ನಿಷೇಧಾಜ್ಞೆ ಸಂಪೂರ್ಣವಾಗಿ ಉಲ್ಲಂಘನೆಯಾಗಿತ್ತು.
ಕೆಂಗಲ್ ಬಳಿ ನಡೆಯುವ ದನಗಳ ಜಾತ್ರೆ ಅಯ್ಯನ ಗುಡಿ ಜಾತ್ರೆ ಎಂದು ಕರೆಯಲಾಗುತ್ತದೆ. ಮದ್ದೂರು, ಕೊಳ್ಳೇಗಾಲ, ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದ ಜನರು ದನಗಳ ಜಾತ್ರೆಯಲ್ಲಿ ಪಾಲ್ಗೊಂಡು ದನಗಳನ್ನು ತಂದು ಮಾರಾಟ ಮಾಡುತ್ತಾರೆ. ಕೃಷಿ ಚಟುವಟಿಕೆಗೆ ಬಳಸಿಕೊಳ್ಳಲು ಬೇಕಾದ ರಾಸುಗಳನ್ನು ಕೊಳ್ಳಲು ಸಹ ಅನೇಕ ರೈತರು ಆಗಮಿಸುತ್ತಾರೆ. ಅಲ್ಲದೆ ಶೋಕಿಗಾಗಿಯೇ ಸಾಕಿರುವ ಹತ್ತಾರು ಲಕ್ಷ ರೂಪಾಯಿ ಮೌಲ್ಯದ ಎತ್ತುಗಳನ್ನು ಪ್ರದರ್ಶನ ಮಾಡುತ್ತಾರೆ.
ಆದ್ದರಿಂದ ಕೊರೊನಾ ಮೂರನೇ ಅಲೆಯ ಕಾರಣದಿಂದ ಸಂಕ್ರಾಂತಿಯಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ದನಗಳ ಜಾತ್ರೆ ನಡೆಯುತ್ತಿರುವುದನ್ನು ನಿಷೇಧಿಸಿ ಜಾತ್ರೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಕೆಂಗಲ್ ಜಾತ್ರೆಯನ್ನು ರದ್ದು ಮಾಡಲಾಗಿದೆ. ಜಾತ್ರೆ ಕಳೆ ಕಟ್ಟದಂತೆ ಎಚ್ಚರಿಕೆ ವಹಿಸಲು ತಾಲ್ಲೂಕು ದಂಡಾಧಿಕಾರಿಗಳಿಗೆ ಹಾಗೂ ಗ್ರಾಮಾಂತರ ಪೋಲಿಸ್ ಠಾಣೆಗೂ ಸಹ ಪತ್ರ ಬರೆಯಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ತಮ್ಮೇಗೌಡ ಮತ್ತು ಅರ್ಚಕರಾದ ರವೀಂದ್ರಕುಮಾರ್ ಭಟ್ ಮತ್ತು ಶರತ್ ರವರು ತಿಳಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು