ಚನ್ನಪಟ್ಟಣದಲ್ಲಿ ಜೆಡಿಎಸ್ ಗೂಡಿಗೆ ಕೈ ಹಾಕಿದ ಸಂಸದ ಡಿ ಕೆ ಸುರೇಶ್, ಮಾಜಿ ಶಾಸಕ ಅಶ್ವಥ್ ಬೆಂಬಲಿಗರಿಗೆ ಅಧಿಕೃತ ಆಹ್ವಾನ
ಎಲ್ಲಾ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಬೇಕು, ನೊಂದವರಿಗೆ ಮಾತ್ರ ನೋವು ಗೊತ್ತು, ನೋವುಂಡವರು ಅಲ್ಲೇ ಇರಲಾಗದು. ಹಾಗಾಗಿ ನಮ್ಮ ಪಕ್ಷಕ್ಕೆ ಆಹ್ವಾನಿಸಲು ಅಶ್ವಥ್ ರವರ ಮನೆಗೆ ಭೇಟಿ ನೀಡಿದ್ದೇನೆ. ಅಶ್ವಥ್ ರವರು ಮೂವತ್ತು ವರ್ಷಗಳ ಕಾಲ ರಾಜಕೀಯ ಮಾಡಿಕೊಂಡು ಬಂದವರು, ಅವರು ತಮ್ಮ ಬೆಂಬಲಿಗರೊಂದಿಗೆ ನಮ್ಮ ಪಕ್ಷಕ್ಕೆ ಬರಲು ಒಪ್ಪಿದ್ದಾರೆ. ಗಾಂಧಿ ಜಯಂತಿ ಯಂದು ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ಅಶ್ವಥ್ ನಾಯಕತ್ವದಲ್ಲಿ ಸಹಸ್ರಾರು ಮಂದಿ ಪಕ್ಷದ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಸೇರ್ಪಡೆಯಾಗಲಿದ್ದಾರೆ ಎಂದು ಮಾಧ್ಯಮ ದವರಿಗೆ ಮಾಹಿತಿ ನೀಡಿದರು.
.
ಕಳೆದ ಚುನಾವಣೆಯಲ್ಲೇ ನಾನು ಆಹ್ವಾನ ನೀಡಿದ್ದೆ, ಇಲ್ಲ ನಾನು ಪಕ್ಷ ನಿಷ್ಠನಾಗಿ ಇರುತ್ತೇನೆಂದು, ಸೋಲು ಗೆಲುವು ಇರುತ್ತದೆ, ಸೋತ ತಕ್ಷಣ ಪಕ್ಷ ತೊರೆದರೆ ಕೆಟ್ಟ ಸಂದೇಶ ಹೋಗುತ್ತದೆ ಎಂದು ಆಹ್ವಾನವನ್ನು ನಿರಾಕರಿಸಿದ್ದರು. ಈಗ ಕಾಲ ಬದಲಾದ ಸಮಯದಲ್ಲಿ ಅವರೇ ಒಪ್ಪಿ ಬರಲಿರುವ ಕಾರಣ ನಾನು ಖುದ್ದು ಆಹ್ವಾನ ನೀಡುತ್ತಿದ್ದೇನೆ.
ಇವರೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಬರುವುದರಿಂದ ಲಾಭ ನಷ್ಟ ಪ್ರಶ್ನೆ ಉದ್ಭವಿಸುದಿಲ್ಲ. ಜಾತ್ಯಾತೀತ ಜನತಾ ದಳ ಎಂಬುವವರಿಂದ ಜಾತ್ಯಾತೀತತೆ ಕಳೆದುಕೊಂಡಿರುವುದರಿಂದ ಬರಲಿದ್ದಾರೆ ಎಂದರು.
ಮುಸ್ಲಿಂ ಮತದಾರರು ಬೇಕಾಗಿಲ್ಲಾ ಎಂದು ಕುಮಾರಸ್ವಾಮಿ ಯವರೇ ಹೇಳಿರುವುದರಿಂದ ಎಲ್ಲಾ ಮುಸ್ಲಿಂ ಮುಖಂಡರು, ಕಾರ್ಯಕರ್ತರು, ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆ. ಮುಸ್ಲಿಂ ಮುಖಂಡರು, ಮತದಾರರು ಅವರಿಗೆ ಬೇಡಾ ಎಂದ ಮೇಲೆ ಅವರಿಗೆ ಅವಮಾನ ಮಾಡಿದಂತೆ. ಅವರಿಗೆ ಇವರು ಬೇಡವೆಂದಾದರೆ ಅಲ್ಲಿದ್ದು ಏನು ಮಾಡುತ್ತಾರೆ. ಹಾಗಾಗಿ ನೋವಿನ ಜೊತೆಗೆ ನಮ್ಮ ಪಕ್ಷದ ಸಿದ್ದಾಂತವನ್ನು ಒಪ್ಪಿ ಬರುತ್ತಿದ್ದಾರೆ.
ಭೈರಾಪಟ್ಟಣ ಗ್ರಾಮದಲ್ಲಿ ಗುದ್ದಲಿ ಪೂಜೆ ನೆರವೇರಿಸಲು ಬಿಜೆಪಿ ಪಕ್ಷದವರು ತೆರಳಿದಾಗ ಕಲ್ಲು, ಮೊಟ್ಟೆಯಲ್ಲಿ ಹೊಡೆಸಿದವರೇ ಅವರ ಜೊತೆಯಲ್ಲಿ ಹೋಗುತ್ತಿರುವುದು ಎಷ್ಟು ಸರಿ ಎಂಬುದನ್ನು ಅವರೇ ಯೋಚಿಸಬೇಕು ಎಂದು ಸಿ ಪಿ ಯೋಗೇಶ್ವರ್ ಮತ್ತು ಹೆಚ್ ಡಿ ಕುಮಾರಸ್ವಾಮಿ ಹೆಸರೇಳದೆ ಮಾರ್ಮಿಕವಾಗಿ ನುಡಿದರು.
ಮೇಕೆದಾಟು ಶಾಶ್ವತ ಹೋರಾಟಕ್ಕೆ ನಾವು ಮುಂದಡಿ ಇಟ್ಟಿದ್ದೇವೆ. ನಮ್ಮ ಸರ್ಕಾರ ಈಗಲೂ ಬದ್ದವಾಗಿದೆ. ಆದರೆ ಸುಪ್ರೀಂ ಕೋರ್ಟ್ ಹಾಗೂ ಭಾಜಪ ಸರ್ಕಾರ ಕಾವೇರಿ ಪ್ರಾಧಿಕಾರ ರಚನೆ ಮಾಡಿವೆ. ಅದರಲ್ಲಿ ತೀರ್ಮಾನ ವಾದರೆ ನಾವು ಮೇಕೆದಾಟು ನಿರ್ಮಾಣಕ್ಕೆ ಬದ್ದವಾಗಿವೆ.
ಈಗಾಗಲೇ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದೆ, ನಮ್ಮ ಪರ ತೀರ್ಪು ಬರವುದೆಂಬ ನಿರೀಕ್ಷೆ ಇದೆ. ಹಸಿರು ಪ್ರಾಧಿಕಾರ, ಕಾವೇರಿ ನೀರು ಪ್ರಾಧಿಕಾರ, ಸುಪ್ರೀಂ ಕೋರ್ಟ್, ತಮಿಳುನಾಡು ಎಲ್ಲರ ತೀರ್ಮಾನ ದ ಮೇಲೆ ಮೇಕೆದಾಟು ಯೋಜನೆ ನಿಂತಿದೆ. ಇದರಲ್ಲಿ ರಾಜಕೀಯ ಬೆರೆಸದೆ, ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಒಗ್ಗೂಡಿ ಹೋರಾಟ ಮಾಡಬೇಕು ಎಂದು ಮಾಧ್ಯಮದವರಿಗೆ ತಿಳಿಸಿದರು.
ಮಾಜಿ ಶಾಸಕ ಎಂ.ಸಿ.ಅಶ್ವತ್ಥ ಮಾತನಾಡಿ, ಜೆಡಿಎಸ್ನಲ್ಲಿನ ಕುಟುಂಬ ರಾಜಕಾರಣ ಬೇಸರ ತರಿಸಿತ್ತು. ನಾವು ೨೫-೩೦ ವರ್ಷಗಳಿಂದ ಹೋರಾಟ ಮಾಡಿಕೊಂಡು ರಾಜಕಾರಣ ಮಾಡಿಕೊಂಡು ಬರುತ್ತಿದ್ದೇವೆ. ನಮಗೆ ಶಕ್ತಿ ಬೇಕು, ಜನರ ಕೆಲಸ ಮಾಡಿಕೊಡಬೇಕು. ಆದರೆ, ಅಲ್ಲಿ ನಮಗೆ ಸರಿಯಾದ ಸಹಕಾರ ಸಿಗಲಿಲ್ಲ. ಡಿ.ಕೆ.ಸಹೋದರರು ಎಲ್ಲೇ ಇದ್ದರು ನಮ್ಮ ಕರೆ ಸ್ವೀಕರಿಸುತ್ತಾರೆ. ನಮಗೆ ಸಹಕಾರ ಕೊಡುತ್ತಾರೆ. ಸಂಸದ ಸುರೇಶ್ ಅವರು ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದು, ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ಗೆ ಸೇರ್ಪಡೆಗೊಳ್ಳುತ್ತಿರುವುದಾಗಿ ತಿಳಿಸಿದರು.
ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಅವರ ವೈಯಕ್ತಿಕ ವಿಚಾರ. ಇಲ್ಲಿಯವರೆಗೆ ಜಾತ್ಯತೀತ ಅಂತ ಹೋರಾಟ ಮಾಡಿಕೊಂಡು ಬಂದಿದ್ದರು. ಜಾತ್ಯತೀತಾ ಬಿಟ್ಟು ಹೋಗುವುದಿಲ್ಲ ಎಂದು ತಿಳಿದಿದ್ದೆವು. ದೇವೇಗೌಡರು ಇರೋವರೆಗೂ ಈ ಪಕ್ಷಕ್ಕೆ ಗೌರವ ಇರುತ್ತೆ ಅಂತ ತಿಳಿದುಕೊಂಡಿದ್ದೆವು. ಅದರೆ, ದೇವೇಗೌಡರಿಗೆ ಅದೇನ್ ಮಾಡಿದ್ರೋ ಗೊತ್ತಿಲ್ಲ. ಚನ್ನಪಟ್ಟಣ, ಹಾಸನದಲ್ಲಿ ಅಲ್ಪಸಂಖ್ಯಾತರು ಮತ ಜೆಡಿಎಸ್ಗೆ ಕೊಟ್ಟಷ್ಟು ಮತ ಎಲ್ಲೂ ನೀಡಲಿಲ್ಲ. ಆದರೂ ಇಂಥ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಹೈಕೋರ್ಟ್ ವಕೀಲ ಹಾಗೂ ಮುಸ್ಲಿಂ ಮುಖಂಡರಾದ ಮುಕ್ರಂ ಮಾತನಾಡಿ, ಕುಮಾರಸ್ವಾಮಿ ಯವರು ಮುಸ್ಲಿಮರಿಗಾಗಿ ನಾನು ಎಲ್ಲವನ್ನೂ ತ್ಯಾಗ ಮಾಡಿದ್ದೇನೆ, ಅವರಿಗೆ ನನ್ನ ಮತ್ತು ನಮ್ಮ ಪಕ್ಷದ ಅವಶ್ಯಕತೆ ಇಲ್ಲ ಎಂದಿದ್ದಾರೆ. ಕುಮಾರಸ್ವಾಮಿ ಯವರೇ ನಮ್ಮ ಸಮುದಾಯದ ಮಾತು ಬಿಡಿ, ನಿಮ್ಮ ಒಕ್ಕಲಿಗ ಸಮುದಾಯಕ್ಕೆ ಏನು ಮಾಡಿದ್ದೀರಿ ಎಂದರು. ನಿಮಗೆ ನಿಯತ್ತಿಲ್ಲಾ, ನಿಮ್ಮ ನಿಯತ್ತಿಗೆ ಈಗಾಗಲೇ ದೇವರು ನಿಮ್ಮ ಆರೋಗ್ಯ ಕಿತ್ತುಕೊಂಡಿದ್ದಾನೆ. ಇನ್ನೊಮ್ಮೆ ಆರೋಗ್ಯ ಹದಗೆಟ್ಟರೆ ಢಮಾರ್ ಆಗುತ್ತೀರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಚಪ್ಪಾಳೆ ಗಿಟ್ಟಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ರವಿ, ರಾಮನಗರದ ಮಾಜಿ ಶಾಸಕ ಕೆ.ರಾಜು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್. ಪ್ರಮೋದ್, ಸುನೀಲ್ ಕುಮಾರ್, ಮುಖಂಡರಾದ ದುಂತೂರು ವಿಶ್ವನಾಥ್, ಬೋರ್ವೆಲ್ ರಂಗನಾಥ್, ಶಿವಮಾದು, ಎಂ.ಸಿ.ಕರಿಯಪ್ಪ, ಜಬಿವುಲ್ಲಾ ಖಾನ್ ಘೋರಿ, ಇತರರು ಇದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು