ಹಾಡುಹಗಲೇ ಮನೆಯ ಬಾಗಿಲು ಮೀಟಿ ನಗ-ನಗದು ಕಳವು
ಚನ್ನಪಟ್ಟಣ: ಹಾಡುಹಗಲೇ ಮನೆಯ ಬಾಗಿಲು ಮೀಟಿ ಒಳನುಗ್ಗಿರುವ ಕಳ್ಳರು ನಗದು ಹಾಗೂ ಚಿನ್ನಾಭರಣ ಕಳುವು ಮಾಡಿರುವ ಘಟನೆ ನಗರದ ಪುರ ಪೋಲಿಸ್ ಠಾಣಾ ವ್ಯಾಪ್ತಿಯ ವಿವೇಕಾನಂದನಗರದ 4ನೇ ಕ್ರಾಸ್ನಲ್ಲಿ ನಡೆದಿದೆ.
ಶಿಕ್ಷಕಿ ಕವಿತಾ ಎಂಬುವವರ ಮನೆಗೆ ಕನ್ನ ಹಾಕಿರುವ ಕಳ್ಳರು 64 ಗ್ರಾಂ ಚಿನ್ನದ ಒಡವೆ ಹಾಗೂ ಒಂದು ಲಕ್ಷ ನಗದನ್ನು ಕಳವು ಮಾಡಿದ್ದಾರೆ.
ಕವಿತಾ ಪತಿ ಜಯಚಂದ್ರರಾಜು ಪ್ರಾವಿಜನ್ ಸ್ಟೋರ್ ನಡೆಸುತ್ತಿದ್ದು, ಶುಕ್ರವಾರ ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಇವರ ಮಗ ರೋಹನ್ ರಾಜ್ ಕನಕಪುರದ ನವೋದಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಸಂಕ್ರಾಂತಿಗೆಂದು ಮನೆಗೆ ಬಂದಿದ್ದ. ಕವಿತಾ ಸಹ ರಜೆ ಹಾಕಿ ಮಗನೊಂದಿಗೆ ಅಂಗಡಿಗೆ ತೆರಳಿದ್ದರು.
ಮಧ್ಯಾಹ್ನ ಬಂದು ನೋಡಿದಾಗ ಯಾರೋ ದುಷ್ಕರ್ಮಿಗಳು ಮನೆಯ ಬಾಗಿಲನ್ನು ಆಯುಧದಿಂದ ಮೀಟಿ ತೆಗೆದಿರುವುದು ಕಂಡುಬಂದಿದೆ. ಮನೆಯ ಒಳಗೆ ಹೋಗಿ ನೋಡಿದಾಗ, ಬೀರುವಿನ ಬಾಗಿಲು ತೆರೆದು 10 ಗ್ರಾಂನ 4 ಚಿಕ್ಕ ಚಿನ್ನದ ಉಂಗುರ, 4 ಗ್ರಾಂ ತೂಕದ ಒಂದು ಚಿನ್ನದ ಉಂಗುರ, 5 ಗ್ರಾಂ ತೂಕದ ಒಂದು ಚಿನ್ನದ ಲಕ್ಷ್ಮಿ ಕಾಯಿನ್, 20 ಗ್ರಾಂ ತೂಕದ ಚಿನ್ನದ ಕೈ ಕಡಗ, 20 ಗ್ರಾಂ ತೂಕದ 4 ಜತೆ ಚಿನ್ನದ ಓಲೆಗಳು, 5 ಗ್ರಾಂ ತೂಕದ 8 ಚಿನ್ನದ ತಾಳಿ ಗುಂಡು ಸೇರಿ 64 ಗ್ರಾಂ ಚಿನ್ನದ ಒಡವೆ ಜತೆಗೆ 1 ಲಕ್ಷ ರೂ. ದೋಚಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು