ಕಳಪೆ ಕಾಮಗಾರಿ ಪರಿಶೀಲನೆ, ಕಿರಿಯ ಇಂಜಿನಿಯರ್ ಶಂಕರ್ ಮೇಲೆ ತೂಗುಗತ್ತಿ
ಹರಿಸಂದ್ರ ಗೇಟ್ ನ ತಂಗುದಾಣ ಪರಿಶೀಲನೆ
ತಾಲ್ಲೂಕಿನ ಲಾಳಾಘಟ್ಟ ಗ್ರಾಮದ ಶಾಲಾ ಆವರಣದಲ್ಲಿ ನಿರ್ಮಿಸಿರುವ ಮಕ್ಕಳ ಸೈಕಲ್ ನಿಲ್ದಾಣ ಮತ್ತು ಸಾತನೂರು ರಸ್ತೆಯ ಹರಿಸಂದ್ರ ಮತ್ತು ನೀಲಸಂದ್ರ ಗ್ರಾಮದ ಬಸ್ ತಂಗುದಾಣದಲ್ಲಿ ನಡೆದಿರುವ ಕಾಮಗಾರಿಗಳು ಮೇಲ್ನೋಟಕ್ಕೆ ಕಳಪೆ ಗುಣಮಟ್ಟದ ಕಾಮಗಾರಿಗಳು ಎಂದು ತಿಳಿಯುತ್ತಿದೆ, ಕಾಮಗಾರಿ, ಅಂದಾಜು ಪಟ್ಟಿ ಹಾಗೂ ಬಿಲ್ ಪರಿಶೀಲಿಸಿ ವರದಿಯನ್ನು ಸಿಇಓ ರವರಿಗೆ ಒಪ್ಪಿಸುತ್ತೇನೆ, ತಪ್ಪು ಎಂಬುದು ಸಾಬೀತಾದರೆ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದು ರಾಮನಗರ ಜಿಲ್ಲಾ ಪಂಚಾಯತಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಕುಮಾರ್ ತಿಳಿಸಿದರು.
ಅವರು ಕಳಪೆ ಕಾಮಗಾರಿ ದೂರು ಆಧರಿಸಿ ಕಾಮಗಾರಿಗಳ ಸ್ಥಳ ತನಿಖೆ ಪರಿಶೀಲನೆ ವೇಳೆ ಮಾತನಾಡಿದರು.
Sanmitra.Co.In ಪತ್ರಿಕೆಯ ಫಲಶೃತಿ
ಚನ್ನಪಟ್ಟಣ ತಾಲ್ಲೂಕಿನ ಲಾಳಾಘಟ್ಟ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ೫,೦೦,೦೦೦ ರೂಪಾಯಿಗಳ ಜಿಲ್ಲಾ ಪಂಚಾಯತಿ ಅನುದಾನದಲ್ಲಿ ಅಂದಾಜು ಕನಿಷ್ಠ ೫೦,೦೦೦ ರೂಪಾಯಿಗಳ ಖರ್ಚಿನಲ್ಲಿ ಅತೀ ಕಳಪೆ ಸೈಕಲ್ ನಿಲ್ದಾಣ ಹಾಗೂ ಸಾತನೂರು ರಸ್ತೆಯ ಹರಿಸಂದ್ರ ಗ್ರಾಮ ಮತ್ತು ನೀಲಸಂದ್ರ ಗ್ರಾಮದ ಹಾಲಿ ಇರುವ ತಂಗುದಾಣಗಳಿಗೆ ದುರಸ್ತಿ ಕಾಮಗಾರಿಗಳ ಹೆಸರಿನಲ್ಲಿ ಯಾವುದೇ ರೀತಿಯ ಕೆಲಸ ಮಾಡದೇ ತಲಾ ೨,೦೦,೦೦೦ ರೂಪಾಯಿಯಂತೆ ಎರಡು ತಂಗುದಾಣಗಳಿಂದ ೪,೦೦,೦೦೦ ರೂಪಾಯಿಗಳ ಬಿಲ್ ತೆಗೆದುಕೊಂಡಿರುವುದರ ಕುರಿತು ನಮ್ಮ ಪತ್ರಿಕೆಯಲ್ಲಿ http://sanmitra.co.in/category/search?token=804 ಫೆಬ್ರವರಿ ೧೫ ಮತ್ತು ಫೆಬ್ರವರಿ ೨೦ ನೇ ತಾರೀಖಿನಂದು ವರದಿಯಾಗಿತ್ತು.
ಮಾಹಿತಿ ಹಕ್ಕು ಕಾರ್ಯಕರ್ತ ವಂದಾರಗುಪ್ಪೆ ಕೃಷ್ಣೇಗೌಡ ಎಂಬುವವರು ಈ ಕಳಪೆ ಕಾಮಗಾರಿಗಳ ವಿರುದ್ಧ ದಾಖಲೆಗಳ ಸಮೇತ ಜಿಲ್ಲಾ ಪಂಚಾಯತಿ ಸಿಇಓ ಮುಲ್ಲೈ ಮುಹಿಲನ್ ಮತ್ತು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ ರಾಜೇಂದ್ರ ರವರಿಗೆ ಲಿಖಿತ ದೂರು ನೀಡಿದ್ದರು.
ನಮ್ಮ ಪತ್ರಿಕೆಯಲ್ಲಿ ವರದಿಯಾದ ನಂತರ ಎಚ್ಚೆತ್ತ ಗುತ್ತಿಗೆದಾರ ಮತ್ತು ಇಂಜಿನಿಯರ್ ಈ ಎರಡು ತಂಗುದಾಣಗಳಿಗೆ ಬೇಕಾಬಿಟ್ಟಿ ಟೈಲ್ಸ್ ಅಂಟಿಸಿ ಮತ್ಯಾವುದೇ ಕೆಲಸ ಮಾಡದೇ ತಟಸ್ಥವಾಗಿದ್ದು ಆ ಟೈಲ್ಸ್ ಗಳು ಆಗಲೇ ಒಡೆದು ಚೂರಾಗುತ್ತಿವೆ.
ತಾಲ್ಲೂಕಿನಾದ್ಯಂತ ಇಂತಹ ಕಳಪೆ ಕಾಮಗಾರಿಗಳು ಬಹಳಷ್ಟಿದ್ದು ಎಲ್ಲಾ ಕಾಮಗಾರಿಗಳ ಸಂಪೂರ್ಣ ವರದಿಯನ್ನು ಮೇಲಿನ ಅಧಿಕಾರಿಗಳಿಗೆ ನೀಡಲಾಗಿದೆ, ಪಕ್ಷಪಾತ ಮಾಡದೇ ಕಾಮಗಾರಿಗಳನ್ನು ಪರಿಶೀಲಿಸಿ ಅಂದಿನ ಎಇಇ ಕುಮಾರಸ್ವಾಮಿ, ಕಿರಿಯ ಇಂಜಿನಿಯರ್ ಶಂಕರ್ ಹಾಗೂ ಸಂಬಂಧಿಸಿದ ತಪ್ಪಿತಸ್ಥರ ವಿರುದ್ಧ ಶೀಘ್ರ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾಹಿತಿ ಹಕ್ಕು ಕಾರ್ಯಕರ್ತ ಕೃಷ್ಣೇಗೌಡ ಇದೇ ಸಮಯದಲ್ಲಿ ಅಧಿಕಾರಿಗಳಿಗೆ ಒತ್ತಾಯಿಸಿದರು.
ಕಳಪೆ ಕಾಮಗಾರಿಗಳಿಗೆ ಬಿಲ್ ಮಾಡಿದ ಇಂಜಿನಿಯರ್ ಶಂಕರ್ ಗೆ ಮೇಲಾಧಿಕಾರಿಗಳು ಪರಿಶೀಲನೆ ವೇಳೆ ಎಲ್ಲಾ ದಾಖಲೆಗಳನ್ನು ತಂದು ಹಾಜರಿರಬೇಕೆಂದು ಹೇಳಿದ್ದರೂ ಸಹ ಯಾವುದೇ ರೀತಿಯ ದಾಖಲೆಗಳನ್ನು ತರದೇ ಬಂದಿದ್ದು ಅವರ ಬೇಜಾವಾಬ್ದಾರಿ ವರ್ತನೆ ಎಂಬುದಕ್ಕೆ ಸಾಕ್ಷಿಯಾಗಿತ್ತು.
ಕಳಪೆ ಗುಣಮಟ್ಟದ ಕಾಮಗಾರಿಗಳ ಪರಿಶೀಲನೆ ವೇಳೆ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಚನ್ನಪ್ಪ, ಅಸಿಸ್ಟೆಂಟ್ ಇಂಜಿನಿಯರ್ ಭರತ್ ಕಿರಿಯ ಇಂಜಿನಿಯರ್ (ಕಳಪೆ ಕಾಮಗಾರಿಗಳಿಗೆ ಬಿಲ್ ಮಾಡಿದವರು) ಶಂಕರ್ ಮತ್ತು ಪ್ರಥಮ ದರ್ಜೆ ಸಹಾಯಕ ವೆಂಕಟಸ್ವಾಮಿ ಹಾಜರಿದ್ದು ಪರೀಶೀಲಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು