ಪಿಎಫ್ ಸಂಬಂಧ ಖಾಸಗಿ ಶಾಲೆಗಳನ್ನು ಜಾಲಾಡುತ್ತಿರುವ ಅಧಿಕಾರಿಗಳು
ಸಾಂದರ್ಭಿಕ ಚಿತ್ರ
ಚನ್ನಪಟ್ಟಣ:ಅನೇಕ ಖಾಸಗಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿ ಗಳಿಗೆ ಭವಿಷ್ಯ ನಿಧಿ (ಪಿಎಫ್) ಕಟ್ಟದೆ ಸಿಬ್ಬಂದಿಗಳು ಕೆಲಸ ಬಿಟ್ಟ ನಂತರ ಭವಿಷ್ಯ ನಿಧಿ ಹಣ ದೊರಕದೆ ಕಂಗಾಲಾಗಿದ್ದಾರೆ. ಈ ಸಂಬಂಧ ಕೆಲವು ನಿರ್ಗಮಿತ ಸಿಬ್ಬಂದಿಗಳು ನೇರವಾಗಿ ಪ್ರಧಾನ ಮಂತ್ರಿ ಕಛೇರಿ ಮತ್ತು ಭವಿಷ್ಯ ನಿಧಿ ಕಛೇರಿಗಳಿಗೆ ಪತ್ರ ಬರೆದಿದ್ದು ಅಧಿಕಾರಿಗಳು ಸಂಬಂಧಿಸಿದ ಶಾಲೆಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಅನೇಕ ವರ್ಷಗಳು ಒಂದೇ ಶಾಲೆಯಲ್ಲಿ ಕೆಲಸ ಮಾಡಿ ಅವರ ತಿಂಗಳ ಸಂಬಳದಲ್ಲಿ ಭವಿಷ್ಯ ನಿಧಿ ಗೆಂದೇ ಹಣವನ್ನು ಮುರಿದುಕೊಂಡಿದ್ದರೂ ಸಹ ಭವಿಷ್ಯ ನಿಧಿ ಯಲ್ಲಿ ಹಣ ಕಟ್ಟದೇ ಇರುವುದರಿಂದ ಕೆಲಸ ತೊರೆದ ನೌಕರರು ತಮ್ಮ ಭವಿಷ್ಯಕ್ಕೆಂದೇ ಕೊಟ್ಟ ತಮ್ಮದೇ ಹಣ ದೊರಕದಿರುವುದರಿಂದ ಕೆಲಸ ತೊರೆದ ನಂತರ ಇತ್ತ ಕೆಲಸವೂ ಇಲ್ಲದೇ ಅತ್ತ ಭವಿಷ್ಯ ನಿಧಿ ಹಣವೂ ಇಲ್ಲದೇ ಬಲಾಢ್ಯ ವ್ಯವಸ್ಥಾಪಕರನ್ನು ನೇರವಾಗಿ ಎದುರು ಹಾಕಿಕೊಳ್ಳಲಾಗದೇ ತ್ರಿಶಂಕು ಸ್ಥಿತಿ ಎದರಿಸುತ್ತಿದ್ದಾರೆ.
*ಏನಿದು ಭವಿಷ್ಯ ನಿಧಿ*
ಒಂದು ಸಂಸ್ಥೆಯಲ್ಲಿ ಕನಿಷ್ಠ ಇಪ್ಪತ್ತು ಮಂದಿಗಿಂತ ಹೆಚ್ಚು ಜನರು ಸೇವೆ ಸಲ್ಲಿಸುತ್ತಿದ್ದರೆ ಆ ಸಂಸ್ಥೆಯ ಮಾಲೀಕರು ಅವರ ಸಂಬಳದಲ್ಲಿ ಪಿಎಫ್ ಗೆ ಎಂದು ಎಷ್ಟು ಹಣ ಮುರಿದುಕೊಳ್ಳುತ್ತಾರೋ ಅಷ್ಟೇ ( ಬಹುಶಃ ೧೨/೫೦) ಹಣವನ್ನು ಸಂಸ್ಥೆಯ ವತಿಯಿಂದ ಭರಿಸಿ ಭವಿಷ್ಯ ನಿಧಿ ಗೆ ಕಟ್ಟಬೇಕು, ಆ ಕಾರ್ಮಿಕ ಕೆಲಸ ಬಿಟ್ಟ ನಂತರ ಭವಿಷ್ಯ ನಿಧಿ ಸಂಸ್ಥೆಯು ಬಡ್ಡಿ ಸಹಿತ ಆ ಕಾರ್ಮಿಕರಿಗೆ ಭವಿಷ್ಯಕ್ಕಾಗಿ ನೀಡುವುದೇ ಭವಿಷ್ಯ ನಿಧಿ.
ಭವಿಷ್ಯ ನಿಧಿಗೆ ಸಂಬಂಧಿಸಿದ ಕಛೇರಿ ನಗರದಲ್ಲಿ ಇಲ್ಲದಿರುವುದರಿಂದ ಸರಿಯಾದ ಮಾಹಿತಿ ದೊರಕದಿದ್ದರೂ ಸಹ ಭೇಟಿ ನೀಡಿದ ಶಾಲೆಗಳ ಮುಖ್ಯ ಶಿಕ್ಷಕರು ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಹೋಗಿರುವುದಾಗಿ ಒಪ್ಪಿಕೊಂಡಿದ್ದಾರೆ.
ಕೇವಲ ಖಾಸಗಿ ಶಾಲೆಗಳಷ್ಟೇ ಅಲ್ಲದೆ ಇಪ್ಪತ್ತಕ್ಕೂ ಹೆಚ್ಚು ಮಂದಿ ಕೆಲಸ ನಿರ್ವಹಿಸುವ ಅನೇಕ ಗುಡಿ ಕೈಗಾರಿಕೆಗಳು, ದೊಡ್ಡ ದೊಡ್ಡ ಮಳಿಗೆಗಳು ಹಾಗೂ ಇನ್ನಿತರ ಸಂಸ್ಥೆಗಳು ಇದ್ದು ಎಲ್ಲವೂ ಪಿಎಫ್ ಮತ್ತು ಇ ಎಸ್ ಐ ಸೌಲಭ್ಯಗಳನ್ನು ಹೊಂದಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ಸಂಬಂಧಿಸಿದ ಅಧಿಕಾರಿಗಳು ಸಂಸ್ಥೆಯ ಆಡಳಿತ ಮಂಡಳಿಯನ್ನು ತನಿಖೆಗೊಳಪಡಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಿ ಈಗಾಗಲೇ ಕೆಲಸ ಬಿಟ್ಟಿರುವ ಕಾರ್ಮಿಕರಿಗೆ ಭವಿಷ್ಯ ನಿಧಿ ಒದಗಿಸಿಕೊಡಬೇಕು.
*ಸಿ ಪುಟ್ಟಸ್ವಾಮಿ ಹಿರಿಯ ರೈತ ಮುಖಂಡರು*
ಅವರು ಬಂದು ಅವರ ಕೆಲಸ ಮಾಡಿಕೊಂಡು ಹೋಗಿರಬಹುದು, ನಮಗೆ ಮಾಹಿತಿ ಇಲ್ಲ, ಶಾಲೆಗಳಿಂದಲೂ ಮಾಹಿತಿ ಇಲ್ಲ.
*ಗಂಗಮಾರೇಗೌಡ, ಉಪನಿರ್ದೇಶಕರು ಶಿಕ್ಷಣ ಇಲಾಖೆ ರಾಮನಗರ*
ಮಾಹಿತಿ ಪಡೆದುಕೊಂಡ ಅಧಿಕಾರಿಗಳಾಗಲಿ ಸಂಬಂಧಿಸಿದ ಶಾಲೆಗಳ ಆಡಳಿತ ಮಂಡಳಿಯಿಂದಾಗಲಿ ನಮಗೆ ಮಾಹಿತಿ ಬಂದಿಲ್ಲ.
*ಸೀತಾರಾಮು ಬಿಇಓ ಚನ್ನಪಟ್ಟಣ*
ನಮ್ಮದು ಕಾರ್ಮಿಕ ಇಲಾಖೆ, ಪಿಎಫ್ ಕೇಂದ್ರ ಸರ್ಕಾರದ ಯೋಜನೆ ಆಗಿರುವುದರಿಂದ ನಮ್ಮ ಇಲಾಖೆಗೆ ಇದು ಸಂಬಂಧ ಪಡುವುದಿಲ್ಲ.
*ಮುನಿಲಿಂಗೇಗೌಡ ಕಾರ್ಮಿಕ ಇಲಾಖೆಯ ಅಧಿಕಾರಿ, ಚನ್ನಪಟ್ಟಣ*
ಚನ್ನಪಟ್ಟಣ ಅಷ್ಟೇ ಅಲ್ಲದೆ ಬಹುತೇಕ ಎಲ್ಲಾ ಕಡೆಯೂ ನೌಕರರು ಪಿಎಫ್ ಸೌಲಭ್ಯದಿಂದ ವಂಚಿತರಾಗಿದ್ದು, ಕೆಲಸ ಬಿಟ್ಟ ನಂತರವೇ ಅದು ನಮ್ಮ ಗಮನಕ್ಕೆ ಬರುತ್ತಿದೆ, ನಂತರ ಹೋಗಿ ವಿಚಾರಿಸಿದರೇ ಹಾರಿಕೆ ಉತ್ತರ ನೀಡಿ ಕಳುಹಿಸುತ್ತಾರೆ.
*ಹೆಸರೇಳಲು ಇಚ್ಚಿಸದ ಪಿಎಫ್ ವಂಚಿತ ಖಾಸಗಿ ಶಾಲೆಯ ನೌಕರ*
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು